ಮಂಗಳೂರು: ಪೊಲೀಸರು ತಮ್ಮ ಕೆಲಸವನ್ನು ಸರಕಾರಿ ಕೆಲಸ ಎಂದು ಭಾವಿಸದೆ, ಸಮಾಜದಲ್ಲಿ ನಮಗೆ ಸಿಕ್ಕ ಅಮೂಲ್ಯ ಜವಾಬ್ದಾರಿ, ಹೊಣೆ ಎಂದು ಪರಿಗಣಿಸಬೇಕು ಎಂದು ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಚಂದ್ರಗುಪ್ತ ಹೇಳಿದರು.
ಮಂಗಳೂರು ಪೊಲೀಸ್ ಕಮಿಷನರೇಟ್, ಜಿಲ್ಲಾ ಪೊಲೀಸ್ ಮತ್ತು ಕೆಎಸ್ಆರ್ಪಿ 7ನೇ ಪಡೆ , ಮಂಗಳೂರು ಘಟಕಗಳ ಆಶ್ರಯದಲ್ಲಿ ಭಾನುವಾರ ನಡೆದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಮತ್ತು ಕಲ್ಯಾಣ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಸಮಾಜದ ಅವಿಭಾಜ್ಯ ಅಂಗ ಆಗಿದೆ. ಇದರಿಂದಾಗಿ ಪೊಲೀಸರಿಗೆ ಸಮಾಜದಲ್ಲಿ ಜವಾಬ್ದಾರಿ ಇದೆ. ಸಮಾಜದಲ್ಲಿ ಪೊಲೀಸ ವೃತ್ತಿಗೆ ಅದರದೇ ಆದ ಗೌರವಿ ಇದೆ. ಜನಸ್ಮೇಹಿ ಪೊಲೀಸ್ ಕರ್ತವ್ಯಕ್ಕೆ ವಿಶೇಷ ಆದ್ಯತೆ ಇದೆ. ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಜನರು ನಮ್ಮ ವೃತ್ತಿ ಹಾಗೂ ಮ,್, ಬಗ್ಗೆ ಹೆಮ್ಮೆ ಪಡುವಂತಹ ಕೆಲಸ ಆಗುತ್ತದೆ. ಜವಾಬ್ದಾರಿ ಅರಿತು ಎಲ್ಲರೂ ಕೆಲಸ ಮಾಡಿದಾಗ ಇಲಾಖೆ ಜತೆಗೆ ಪೊಲೀಸ್ ವೃತ್ತಿಗೂ ಗೌರವ ಇಮ್ಮಡಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಪೊಲೀಸ್ ನಿರೀಕ್ಷಕ ರಾಘವ ಪಡೀಲ್ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿತು. ರಾಜ್ಯದ ಐದು ಜಿಲ್ಲೆಗಳಲ್ಲಿ ಕರ್ತವ್ಯ ಮಾಡಿದ ಹೆಮ್ಮೆ ಇದೆ. ಈ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕರ್ತವ್ಯ ನಿಭಾಯಿಸಿದ ಖುಷಿ, ವೃತ್ತಿ ಗೌರವ ಸಿಕ್ಕಿದೆ. ಪೊಲೀಸರು ಪರಿಸ್ಥಿತಿಗೆ ಹೊಂದಿಕೊಂಡು ಶಿಕ್ಷಣ ಮತ್ತು ಜ್ಞಾನಾಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ನಿವೃತ್ತ 61 ಮಂದಿ ಪೊಲೀಸರು ಮತ್ತು ಸಿಬ್ಬಂದಿಯನ್ನು ಇದೇ ವೇಳೇ ಸನ್ಮಾನಿಸಲಾಯಿತು. ಕೆಎಸ್ಆರ್ ಪಿ 7ನೇ ಪಡೆಯ ಕಮಾಂಡೆಂಟ್, ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್ ಇದ್ದರು.
ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ವರದಿ ವಾಚಿಸಿದರು. ಡಿಸಿಪಿ ದಿನೇಶ್ ಕುಮಾರ್ ವಂದಿಸಿದರು. ಸಿಬ್ಬಂದಿ ಗಜೇಂದ್ರ ಜೆ.ಪಿ ನಿರೂಪಿಸಿದರು