ಉಡುಪಿ (ಶಿರ್ವ): ವಿದ್ಯುತ್ ಪರಿವರ್ತಕದಿಂದ ಹಾರಿದ ಕಿಡಿಯಿಂದ ಕಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ಭಾನುವಾರ ಸಂಭವಿಸಿದೆ.
ತಾಂತ್ರಿಕ ಕಾಲೇಜು ಬಳಿ ಇದ್ದ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ಬಿದ್ದ ಪರಿಣಾಮ ಬೆಂಕಿ ಹತ್ತಿ ಕಾಡಿಗೆ ವ್ಯಾಪಿಸಿದೆ. ಬೆಂಕಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಹತೋಟಿಗೆ ಬರಲಿಲ್ಲ ಈ ವೇಳೆ ಸ್ಥಳಕ್ಕೆ ಬಂದ ಉಡುಪಿ ಅಗ್ನಿಶಾಮಕ ದಳದ ಮೀರ್ ಮಹಮ್ಮದ್ ಗೌಸ್ ಮತ್ತು ಅವರ ತಂಡ ಬೆಂಕಿ ಹತೋಟಿಗೆ ತರಲು ಹರಸಾಹಸ ಪಟ್ಟರು, ಅಲ್ಲದೆ ಅದಾನಿ ಸಂಸ್ಥೆಯ ಅಗ್ನಿಶಾಮಕ ದಳದ ವಾಹನಗಳೂ ಬಂದು ಬೆಂಕಿ ಆರಿಸುವಲ್ಲಿ ಸಹಕರಿಸುತ್ತಿದ್ದಾರೆ.
ಘಟನೆ ನಡೆದ ವೇಳೆ ಕಾಲೇಜಿನ ಪ್ರಾಂಶುಪಾಲ ತಿರುಮಲೇಶ್ವರ ಭಟ್, ಗ್ರಾಮ ಪಂಚಾಯಿತಿ ಸದಸ್ಯ ಕೆ. ಆರ್. ಪಾಟ್ಕರ್, ಜ್ಯೋತಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು, ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು, ಸ್ಥಳೀಯರಾದ ರಾಘವೇಂದ್ರ ನಾಯಕ್, ವಿರೇಂದ್ರ ಪಾಟ್ಕರ್, ಅನಂತರಾಮ ವಾಗ್ಲೆ ಮುಂತಾದವರು ಸ್ಥಳದಲ್ಲಿ ಉಪಸ್ಥಿತರಿದ್ದು ಬೆಂಕಿ ನಂದಿಸಲು ಸಹಕರಿಸಿದರು.
ಶಿರ್ವ ಪೋಲಿಸ್ ಠಾಣೆಯ ಅನಿಲ್ ಕುಮಾರ್ ನಾಯಕ್ ಮತ್ತು ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದು ಬೆಂಕಿ ನಂದಿಸಲು ಸಹಕರಿಸುತ್ತಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ.