ಕಾರವಾರ (ಭಟ್ಕಳ): ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಾರಿನಲ್ಲಿ ಸಾಗಿಸುವ ವೇಳೆ ತಾಲೂಕಿನ ಸರ್ಪನಕಟ್ಟೆ ಪೋಲಿಸ್ ಚೆಕ್ ಪೋಸ್ಟ ಬಳಿ ತಪಾಸಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರ ವರದಿ ಆಗಿದೆ.
ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ನಗರ ಠಾಣೆಯ ಪಿಎಸ್ಐ ಸಂತೋಷ ಹಾಗೂ ಸಿಬ್ಬಂದಿ ಸರ್ಪನಕಟ್ಟೆ ಚೆಕ್ ಪೋಸ್ಟ್ ಬಳಿ ತಪಾಸಣೆ ಸಂದರ್ಭ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಕಾರಿನಲ್ಲಿ 14.90 ಲಕ್ಷ ರೂಪಾಯಿ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ತಪಾಸಣೆ ಮಾಡಿದಾಗ ಮೂವರು ಆರೋಪಿಗಳು ಹಣವನ್ನು ಮುರುುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೋಲಿಸರಿಗೆ ತಿಳಿಸಿದ್ದಾರೆ.
ಮೂವರು ಆರೋಪಿಗಳೊಂದಿಗೆ ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ನಗರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.