ಕಡಬ: ದೈವದ ನರ್ತನ ಸೇವೆ ಮಾಡುತ್ತಿರುವ ವೇಳೆಯಲ್ಲಿಯೇ ಕುಸಿದು ಬಿದ್ದು ದೈವನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ನಡೆದಿದೆ.
ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ (55) ಮೃತರು. ಹಲವು ವರ್ಷದಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮ ದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಾರ್ಚ್ 30 ರಂದು ರಾತ್ರಿ 2 ಗಂಟೆಗೆ ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು.ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯದರು ಯಾವುದೇ ಫಲ ನೀಡಲಿಲ್ಲ ಎಂಬ ಮಾಹಿತಿ ಲಭಿಸಿದೆ.
ಘಟನೆ ನಡೆವ ವೇಳೆ ಕಾಂತು ಅಜಿಲ ಅವರು ಶಿರಾಡಿ ದೈವಕ್ಕೆ ನರ್ತನ ಸೇವೆ ನೀಡುತ್ತಿದ್ದರು. ಅವರ ಜತೆ ಕಲ್ಕುಡ ದೈವದ ಪಾತ್ರಿ ನರ್ತನ ಸೇವೆ ನೀಡುತ್ತಿದ್ದರು. ಅದಕ್ಕೂ ಮೊದಲು ಬರ್ಮೆರ್ ಹಾಗೂ ಗಿಣಿ ರಾಮ ದೈವಕ್ಕೆ ನೇಮೋತ್ಸವ ನಡೆದಿತ್ತು. ನರ್ತನ ಸೇವೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕಾಂತು ಅಜಿಲ ಅವರು ನಿಧನ ಹೊಂದಿರಬಹುದು ಎಂದು ತಿಳಿದು ಬಂದಿದೆ.