ಉಡುಪಿ (ಬ್ರಹ್ಮಾವರ): ಪಾನ್ ಕಾರ್ಡ್ಗೆ ಆಧಾರ ಲಿಂಕ್ ಮಾಡಿ ಎಂದು ಬಡ ಜನತೆಯಿಂದ ಹಣವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ, ತನ್ನ ಆಡಳಿತದ ಅವಧಿಯಲ್ಲಿ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಿಸಿ ಜನತೆಯನ್ನು ಮತ್ತಷ್ಟು ಬಡವರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸುಧೀರ್ ಕುಮಾರ್ ಮರೋಳಿ ಆಕ್ರೋಶ ಹೊರ ಹಾಕಿದರು.
ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚೇಂಪಿಯಲ್ಲಿ ಭಾನುವಾರ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಸಮಾನತೆಗೆ ಅವಕಾಶ ನೀಡಿದೆ. ಹೆಣ್ಣು ಮಗಳ ಭಾವನೆಯನ್ನು ಅರ್ಥೈಸಿಕೊಂಡು ಅನೇಕ ಹೊಸ ಯೋಜನೆಗಳನ್ನು ನೀಡುತ್ತಿದೆ. ಬಿ.ಜೆ.ಪಿ ಸರ್ಕಾರದ ಆಡಳಿತದಿಂದ ರೋಸಿ ಹೋದ ಜನತೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ವೆರೋನಿಕಾ ಕರ್ನೆಲಿಯೋ ಮಾತನಾಡಿ, ಮಹಿಳೆಯರು ರಾಜಕೀಯದಲ್ಲಿ ಸಕ್ರಿಯರಾಗಿ ಸದೃಢರಾಗಬೇಕು. ರಾಜ್ಯ ಮತ್ತು ಕೇಂದ್ರದ ನೀತಿಗಳಿಂದ ಬದುಕುವುದು ಕಷ್ಟಕರವಾಗಿದೆ. ಸ್ವಾಭಿಮಾನದ ಬದುಕನ್ನು ನಡೆಸಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನೂರ್ಜಿತಗೊಳಿಸಿರುವುದನ್ನು ಖಂಡಿಸಿದರು.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ ಹೆಗ್ಡೆ ಮೊಳಹಳ್ಳಿ, ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಮಹಿಳಾ ಮುಖಂಡರಾದ ಗೀತಾ ವಾಗ್ಲೆ, ರೇಖಾ ಸುವರ್ಣ, ದೇವಕಿ ಸಣ್ಣಯ್ಯ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮಮತಾ ಶೆಟ್ಟಿ, ಡಾ.ಸುನಿತಾ ಶೆಟ್ಟಿ, ಕಲ್ಪನಾ, ಪ್ರಫುಲ್ಲಾ ಕೃಷ್ಣ, ಲೀಲಾವತಿ, ಕಸ್ತೂರಿ ಹೆಬ್ಬಾರ್, ಸುಧಾ ಎ ಪೂಜಾರಿ, ಅನಿತಾ ಡಿಸೋಜಾ, ರೋಶನಿ ಒಲಿವೆರಾ, ವಿಕಾಸ್ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಕೊಡವೂರು, ಶ್ರೀಧರ್ ಪಿ.ಎಸ್, ಶ್ರೀನಿವಾಸ ಅಮೀನ್ ಇದ್ದರು.