ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಎಸ್. ಅಂಗಾರ ಅವರೇ ಮತ್ತೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಂಗಾರ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿ ಗುಂಪು ರಹಸ್ಯ ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
19 ಗ್ರಾಮಗಳ 50 ಕ್ಕೂ ಹೆಚ್ಚು ಪ್ರಮುಖರು ಇಲ್ಲಿಯ ನಿರೀಕ್ಷಣಾ ಮಂದಿರದಲ್ಲಿ ಸಭೆ ಸೇರಿ, ಅಂಗಾರ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿ ಮಾಡದಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಪಟ್ಟಣದ ಸಮೀಪ ಅಂಗಾರ ಸಾಕು– ಹೊಸಬರು ಬೇಕು, ಈ ಬಾರಿ ಬಿಜೆಪಿಯ ಅಭ್ಯರ್ಥಿ ಬದಲಾವಣೆಗೆ ನಮ್ಮ ಮತ ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಗೋ ಬ್ಯಾಕ್ ಅಂಗಾರ ಎಂಬ ನಾಮಫಲಕಗಳನ್ನು ಹಾಕಲಾಗಿದೆ.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಮಾತನಾಡಿ, ಯಾರೇ ಸಭೆ ನಡೆಸಿದ್ದರೂ, ಬ್ಯಾನರ್ ಅಳವಡಿಸಿದ್ದರೂ ಪಕ್ಷದ ಪ್ರಮುಖರ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಬ್ಯಾನರ್ ಅನ್ನು ಯಾರು ಬೇಕಾದರೂ ಅಳವಡಿಸಬಹುದು. ಬಿಜೆಪಿ ಕಾರ್ಯಕರ್ತರೇ ಅಳವಡಿಸಿರಬೇಕು ಎಂದೇನೂ ಇಲ್ಲ ಎಂದರು.