ಕಾರವಾರ: ಇದೇ 28 ಮತ್ತು 29 ರಂದು ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ನಡೆಯಲಿರುವ ಭ್ರಷ್ಟಾಚಾರ ವಿರೋಧಿ ಪಾದಯಾತ್ರೆ ಅಂಗವಾಗಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರ ತಂಡ ಗ್ರಾಮ ಗ್ರಾಮಗಳಿಗೆ ತೆರಳಿ ಜನರ ಬೆಂಬಲ ಯಾಚಿಸಿದರು.
ಕಾರವಾರ ತಾಲೂಕಿನ ಚೆಂಡಿಯಾ, ಅಮದಳ್ಳಿ, ಅಂಕೋಲಾ ತಾಲೂಕಿನ ಭಾವಿಕೇರಿ, ಬೇಲೇಕೇರಿ, ಕೇಣಿ, ಅವರ್ಸಾ ಸೇರಿದಂತೆ, ಪಾದಯಾತ್ರೆ ಸಾಗುವ ಎರಡೂ ತಾಲೂಕಿನ ಹಲವು ಗ್ರಾಮಗಳಿಗೆ ಶನಿವಾರ ಮಾಧವ ನಾಯಕ ಮತ್ತವರ ತಂಡ ಪೂರ್ವಭಾವಿ ಭೇಟಿ ನೀಡಿತು. ಈ ವೇಳೆ ಕರಪತ್ರಗಳನ್ನು ವಿತರಿಸಿ, ಪಾದಯಾತೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜನರು, ಭ್ರಷ್ಟಾಚಾರ ಮಿತಿ ಮೀರಿದ್ದು, ನಿರ್ಮೂಲನೆ ಆಗಬೇಕಿದೆ. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ಸಹಕಾರ ಯಾವತ್ತೂ ಇದೆ ಎಂದು ಬೆಂಬಲ ಘೋಷಿಸಿದರು.
ಕಾರ್ಯಕ್ರಮಕ್ಕೆ ನ್ಯಾ.ಸಂತೋಷ್ ಹೆಗ್ಡೆ, ಪದ್ಮಶ್ರೀಗಳ ಸಾಥ್: ಜನಶಕ್ತಿ ವೇದಿಕೆ ಹಾಗೂ ಸಮಾನ ಮನಸ್ಕರ ಸಂಘಟನೆಗಳು ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ಖಂಡಿಸಿ ಹಮ್ಮಿಕೊಂಡಿರುವ ಈ ಜನಜಾಗೃತಿ ಬೃಹತ್ ಪಾದಯಾತ್ರೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಆಗಮಿಸುತ್ತಿದ್ದಾರೆ.
ಮಾ. 28 ರಂದು ಬೆಳಿಗ್ಗೆ 6.30 ಕ್ಕೆ ಕಾರವಾರ ನಗರಸಭೆ ಉದ್ಯಾನದಲ್ಲಿರುವ ಮಹಾತ್ಮಾಗಾಂಧಿ ಮೂರ್ತಿ ಎದುರಿನಿಂದ ಪ್ರಾರಂಭವಾಗಿ, ಬಿಣಗಾ, ಅರಗಾ, ಅಮದಳ್ಳಿ, ಚೆಂಡಿಯಾ ಮಾರ್ಗವಾಗಿ ಅವರ್ಸಾದಲ್ಲಿ ವಸತಿಗಾಗಿ ತಂಗಲಿದೆ. ಮಾ.29 ರಂದು ಅವರ್ಸಾದಿಂದ ಬೆಳಿಗ್ಗೆ 8.30ಕ್ಕೆ ಪಾದಯಾತ್ರೆ ಮುಂದುವರೆದು ದಂಡೇಬಾಗ, ಬೊಗ್ರಿಗದ್ದೆ, ಬೇಲೆಕೇರಿ, ಬಾವಿಕೇರಿ, ಬಡಗೇರಿ, ಕೇಣಿ ಮಾರ್ಗವಾಗಿ ಮಧ್ಯಾಹ್ನ 2.30ಕ್ಕೆ ಅಂಕೋಲಾ ಶಾಂತಾದುರ್ಗಾ ದೇವಸ್ಥಾನ ತಲುಪಲಿದೆ. ಅಲ್ಲಿ ಅಂಕೋಲಿಗರ ಸೇರುವಿಕೆಯಿಂದ ಮತ್ತು ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ ಮತ್ತು ಪದ್ಮಶ್ರೀಗಳಾದ ಸುಕ್ರಿ ಗೌಡ, ತುಳಸಿ ಗೌಡರ ಪಾಲ್ಗೊಳ್ಳುವಿಕೆಯಲ್ಲಿ ಮುಂದುವರೆದ ಪಾದಯಾತ್ರೆ, ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಬೃಹತ್ ಸಭೆಯಾಗಿ ಮಾರ್ಪಡಲಿದೆ.
ಈ ವೇಳೆ ಲಕ್ಷ್ಮಿಕಾಂತ ನಾಯ್ಕ, ಗಣಪತಿ ನಾಯ್ಕ, ನಿತ್ಯಾನಂದ ನಾಯ್ಕ, ಸುರೇಶ ನಾಯ್ಕ, ಮಂಜುನಾಥ ಮೇತ್ರಿ, ಕಿಶನ್ ನಾಯ್ಕ, ಸಂದೇಶ ಮೇತ್ರಿ, ಪ್ರಸಾದ್ ಮೇತ್ರಿ, ಅನೂಪ್ ನಾಯ್ಕ, ಪೇರು ನಾಯ್ಕ, ರಾಹುಲ್ ಬಾನಾವಳಿ, ಮಂಥನ ಗುನಗಿ, ಸುಭಾಷ್ ನಾಯ್ಕ, ಹೊನ್ನಪ್ಪ ನಾಯಕ, ಪಾಂಡು, ರಾಜಾ ಖಾರ್ವಿ, ರಾಘು ನಾಯ್ಕ, ಮಧುಕರ ನಾಯ್ಕ, ದತ್ತಾ ನಾಯ್ಕ, ಸುಭಾಸ ನಾಯ್ಕ, ಅನಂತ ಕಟ್ಟಿಮನಿ, ಅಂಕಿತ್ ಬಂಟ, ಆದೇಶ ನಾಯ್ಕ, ರವಿ ನಾಯ್ಕ, ವಿಘ್ನೇಶ್ ನಾಯ್ಕ, ಸೂರಜ್ ನಾಯ್ಕ, ಕೃಷ್ಣ ನಾಯ್ಕ, ಸಂದೀಪ ನಾಯ್ಕ, ರಾಘು ನಾಯ್ಕ, ನಟರಾಜ ನಾಯ್ಕ, ಜಯವಂತ ನಾಯ್ಕ, ಯುವರಾಜ ನಾಯ್ಕ, ನಾಗೇಶ ನಾಯ್ಕ, ಮಾರುತಿ ನಾಯ್ಕ, ವಿಜಯ ಬಂಟ, ಸಂದೇಶ ನಾಯ್ಕ, ಪವನ ಗಾವಂಕರ, ಸಂತೋಷ ನಾಯ್ಕ, ಬಾಬು ಶೇಖ್, ಮಹೇಶ ನಾಯಕ ಇದ್ದರು.