ಕಾರವಾರ(ಸಿರಸಿ): ರಾಜಕೀಯ ಲಾಭ ಹಾಗೂ ಮತಕ್ಕಾಗಿ ಹಿಂದೂ ಧರ್ಮ, ಹಿಂದೂ ಸಮಾಜವನ್ನು ನಾಶ ಮಾಡುವಂತಹ ಹುನ್ನಾರ ನಡೆಯುತ್ತಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ. ಪ್ರಭಾಕರ ಭಟ್ಟ ಕಲ್ಲಡ್ಕ ಹೇಳಿದರು.
ಬುಧವಾರ ಇಲ್ಲಿನ ಯುಗಾದಿ ಉತ್ಸವ ಸಮಿತಿ ಬೆಳ್ಳಿ ಹಬ್ಬ ಹಾಗೂ ಶೋಭನನಾಮ ಸಂವತ್ಸರದ ಯುಗಾದಿ ಉತ್ಸವದ ಸಾರ್ವಜನಿಕ ಕಾರ್ಯಕ್ರಮದ ವಕ್ತಾರರಾಗಿ ಅವರು ಮಾತನಾಡಿದರು.
ಸರ್ಕಾರ ನೀಡುವ ಸೌಲಭ್ಯದ ಲಾಭಗಳು ಒಂದು ಸಮುದಾಯಕ್ಕೆ ತಲುಪುತ್ತಿವೆ. ಸೌಲಭ್ಯಗಳ ಜತೆ ಜನಸಂಖ್ಯೆ ಏರುತ್ತಿದೆ. ಜನಸಂಖ್ಯೆ ಏರಿದಂತೆ ಈ ನೆಲದ ಭೂಮಿ ಕೂಡ ಅವರದ್ದೇ ಆಗುತ್ತದೆ. ಲವ್ ಜಿಹಾದ್ ನಂತ ಪ್ರಕರಣಗಳು ಹೆಚ್ಚುತ್ತಿವೆ. ಮೋಸ ವಂಚನೆ ನಡೆದಿದೆ. ಇವೆಲ್ಲವೂ ನಡೆಯುವುದು ಹಿಂದೂ ಸಮಾಜದವರ ಮೇಲೆಯೇ. ಈ ಮೊದಲೇ ಹಿಂದುಗಳ ಜನಸಂಖ್ಯೆ ಕುಸಿದಿದೆ. ಇನ್ನೊಂದು ಕಡೆ ಹಿಂದೂ ಸಮಾಜದ ಮತಾಂತರ ಕಾರ್ಯ ಕೂಡವು ವ್ಯವಸ್ಥಿತವಾಗಿ ನಡೆದಿದೆ ಎಂದು ಆರೋಪಿಸಿದರು.
ಗುಣಕ್ಕೆ ಮರುಳಾಗಬೇಕೇ ಹೊರತು ಹಣಕ್ಕಲ್ಲ. ಹಿಂದೂ ಸಮಾಜ ಜಗತ್ತಿಗಾಗಿ ಬದುಕಬೇಕಿದೆ. ಭಗವದ್ಗೀತೆ ಎಲ್ಲ ಮಕ್ಕಳಿಗೂ ಹೇಳಿಕೊಡಬೇಕು. ಈ ದೇಶದ ಮಣ್ಣಿನ ಗುಣವನ್ನು ಸುವಾಸನೆಯನ್ನು ಭಗವದ್ಗೀತೆ ಹೊಂದಿದೆ. ವಿದೇಶದಲ್ಲಿ ಕೂಡ ಗೀತೆ ಕಲಿಸಬೇಕು. ಸ್ವರ್ಣವಲ್ಲೀ ಸಂಸ್ಥಾನ ಗೀತಾಭಿಯಾನ ನಡೆಸುವದು ಶ್ರೇಷ್ಠ ಕೆಲಸ. ಪ್ರತೀ ಮನೆಯಲ್ಲಿ ಮಕ್ಕಳಿಗೆ ಗೀತೆ ಓದಿಸಬೇಕು ಎಂದರು.
ನಮ್ಮ ಪರಂಪರೆ ಋಷಿ ಪರಂಪರೆ. ಹಿಂದೂ ಸಮಾಜದವರು ಪ್ರಕೃತಿ ದೇವರು ಅಂತ ತಿಳಿದವರು. ಪ್ರಕೃತಿ ಬದುಕಿನಲ್ಲಿ ಸಂತೋಷ ಉಂಟಾದಾಗ ಆ ಸಂದರ್ಭ ನಮ್ಮ ಹೊಸ ವರ್ಷ. ಯುಗಾದಿಗೆ ಹೂವು ಅರಳುತ್ತದೆ. ಎಲೆ ಚಿಗುರುತ್ತದೆ. ಅದೇ ಹೊಸ ವರ್ಷ ಎಂದರು.
ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಶ್ರೀಕಾಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.