ಉಡುಪಿ (ಹೆಬ್ರಿ): ಕೃಷಿ ಸಾಧಕ ಅಂತರ ರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿ ಆಗಿರುವ ಮೂಡಬಿದರೆ ಎಸ್ ಕೆಎಫ್ ಸಮೂಹ ಸಂಸ್ಥೆ ಮತ್ತು ಮುನಿಯಾಲಿನ ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ಅವರ ಕೃಷಿ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವಿಶ್ವಕರ್ಮರಿಗೆ ಮಂಗಳೂರು ವಿಶ್ವವಿದ್ಯಾಲಯವು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರತಿಷ್ಠಿತ ಗೌರವವನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮೊದಲ ಡಾಕ್ಟರೇಟ್ ಗೌರವವನ್ನು ರಾಮಕೃಷ್ಣ ಆಚಾರ್ ಸ್ವೀಕರಿಸಿದ್ದಾರೆ ಎಂಬುದು ಊರಿನವರ ಹೆಮ್ಮೆ.
ಜಿ.ರಾಮಕೃಷ್ಣ ಆಚಾರ್ ಸ್ಥಾಪಿಸಿದ ಎಸ್ಕೆಎಫ್ ಉದ್ಯಮ ಸಮೂಹ ಸಂಸ್ಥೆಯು ಸಿರಿಧಾನ್ಯಗಳ ಸಂಸ್ಕರಣೆ, ಕುಡಿವ ಸ್ವಚ್ಛ ನೀರಿನ ಪೂರೈಕೆ, ತ್ಯಾಜ್ಯ ನೀರಿನ ಸಂಸ್ಕರಣೆಯಂತಹ ಆವಿಷ್ಕಾರಗಳ ಮೂಲಕ ಎಸ್ಕೆಎಫ್ ಸಂಸ್ಥೆ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ 40 ವರ್ಷಗಳಿಂದ ಮುಂಚೂಣಿಯಲ್ಲಿದೆ.
ಮೂಡುಬಿದಿರೆ ಎಸ್ಕೆಎಫ್ ಗ್ರೂಪ್ ಕಾರ್ಪೊರೇಟ್ ಸಾಮಾಜಿಕ ಬದ್ಧತೆ-ಸಿಎಸ್ಆರ್ ಚಟುವಟಿಕೆಗಳ ಅನ್ವಯ ಪರಿಸರ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ, ಶೈಕ್ಷಣಿಕ ಹಾಗೂ ನಿರಂತರ ವೈದ್ಯಕೀಯ ಶಿಬಿರ ಆಯೋಜಿಸುತ್ತಾ ಬಂದಿದ್ದು, ಅದಕ್ಕಾಗಿ ಗಣನೀಯ ಪ್ರಮಾಣದ ಅನುದಾನ ಮೀಸಲು ಇಡಲಾಗಿದೆ. ಬಾಡಿಗೆ ಶೆಡ್ನಲ್ಲಿ 25 ಸಾವಿರ ರೂಪಾಯಿ ಬಂಡವಾಳದಿಂದ ವೃತ್ತಿ ಜೀವನವನ್ನು ಆರಂಭಿಸಿದ್ದ ರಾಮಕೃಷ್ಣ ಆಚಾರ್ ಅವರು ಪ್ರಾರಂಭಿಸಿದ ಕಾಳಿಕಾಂಬಾ ಫ್ಯಾಬ್ರಿಕೇಷನ್ ಇವತ್ತು 65 ಕೋಟಿ ರೂಪಾಯಿಗೂ ಹೆಚ್ಚು ಅಂದರೆ ವಾರ್ಷಿಕ ವಹಿವಾಟು 150 ಕೋಟಿ ರೂ. ಮೀರಿದೆ. 3000 ಮಂದಿಗೆ ಉದ್ಯೋಗ ನೀಡಿರುವ ಹೆಮ್ಮೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ರಾಮಕೃಷ್ಣ ಆಚಾರ್ ಕಠಿಣ ಪರಿಶ್ರಮದ ಮೂಲಕ ಅಂತರ ರಾಷ್ಟೀಯ ಮಟ್ಟದ ಉದ್ಯಮ ಸಮೂಹ ನಡೆಸುತ್ತಿದ್ದಾರೆ.
ಮೂಡಬಿದರೆ ಎಸ್ಕೆಎಫ್ ಸಮೂಹ ಸಂಸ್ಥೆಯ ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲು ಗೋಧಾಮವು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ರಾಸಾಯನಿಕ ಮುಕ್ತ ನೆಲ ಮತ್ತು ಜಲವನ್ನು ಉಳಿಸಲು ದೇಶೀ ಹಸುಗಳ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಗೋವಿನ ಹಾಲಿನಿಂದ ವಿವಿಧ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಪನ್ನೀರ್ ಅನ್ನು ತಯಾರಿಸಲಾಗುತ್ತಿದೆ. ಗೋವಿನ ಸೆಗಣಿ, ಗಂಜಲ ಬಳಸಿ ಜೀವಾಮೃತ ಸಾವಯವ ಗೊಬ್ಬರ, ಎರೆಹುಳ ಗೊಬ್ಬರವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ 30 ಎಕರೆ ಪ್ರದೇಶದಲ್ಲಿ ಹೊಸ ಲೋಕವನ್ನು ಸೃಷ್ಟಿಸಿದೆ.