ಮಂಗಳೂರು: ಶಿವದೂತೆ ಗುಳಿಗೆ ಎಂಬ ಅಮೋಘ ನಾಟಕದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ್ದು, ಜಪಾನಿ ಗುಳಿಗೆಗೆ ಹೋಲಿಕೆ ಮಾಡಿದ್ದಾರೆ. ತುಳುವರು ನಂಬುವ ದೈವವನ್ನು ಅವಮಾನ ಮಾಡಿದ್ದಾರೆ ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಅವರ ವಿಜಯ ಸಂಕಲ್ಪ ಯಾತ್ರೆ ಕೊನೆಯ ಯಾತ್ರೆ ಆಗಲಿದೆ. ಈ ಬಾರಿ ಜನರು ಅವರನ್ನು ಡಸ್ಟ್ ಬಿನ್ ಗೆ ಹಾಕುತ್ತಾರೆ. ಕಾಂಗ್ರೆಸ್ ಅನ್ನು ಡಸ್ಟ್ ಬಿನ್ ಗೆ ಹಾಕುತ್ತಾರೆ. ಬಿಜೆಪಿ ಸರ್ಕಾರ ಕಸದ ಬುಟ್ಟಿಗೆ ಸೇರುತ್ತದೆ ಎಂದು ಮುಖ್ಯಮಂತ್ರಿ ಹೇಳಿಕೆ ಹಾಸ್ಯಾಸ್ಪದ. ಕಾಂಗ್ರೆಸ್ ಎಂದಿಗೂ ಡಸ್ಟ್ ಬಿನ್ ಗೆ ಹೋಗಲ್ಲ, ಬಿಜೆಪಿಗೆ ಅದು ಶಾಶ್ವತ ಎಂದರು.
ಸಿಟಿ ರವಿ ಶಿವ, ರಾಮ, ಕೃಷ್ಣ ಎಲ್ಲ ದೇವರುಗಳೂ ಬಿಜೆಪಿಯವರೇ ಎಂದು ಹೇಳಿದ್ದರು. ದೇವರನ್ನೂ ಇವರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಿಂದೊಮ್ಮೆ ಹೆಬ್ರಿಯಲ್ಲಿ ಡಿಕೆಶಿ ಅವರಿಗೆ ಅಭಿಮಾನಿಗಳು ಖಡ್ಸಲೆ ಕೊಟ್ಟಾಗ, ಇದು ದೈವಕ್ಕೆ ಅವಮಾನ ಎಂದು ಬಿಜೆಪಿ ದಯಾನಂದ ಕತ್ತಲ್ ಸಾರ್ ಹೇಳಿದ್ದರು. ಆಮೇಲೆ ಇವರೇ ದೈವದ ಮುಖವಾಡವನ್ನು ಪಡೆದಿದ್ದರು. ಇದು ದೈವಕ್ಕೆ ಅಪಚಾರ ಆಗೋದಿಲ್ಲವೇ? ಇವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದು, ಪೂಜೆ ಮಾಡಬಹುದು. ಮೊನ್ನೆ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರ ವಿಡಿಯೊ ವೈರಲ್ ಆಗಿದೆ. ಸಿದ್ದರಾಮಯ್ಯ ಹೋಗಬಾರದು ಎಂದು ವಿವಾದ ಮಾಡುತ್ತಾರೆ. ಇವರೆಲ್ಲ ಹೇಳುವುದು ಒಂದು, ಮಾಡೋದು ಇನ್ನೊಂದು ಕೆಲಸ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕೊಡುಗೆ ಎಲ್ಲರಿಗೂ ಗೊತ್ತಿದೆ. ನಾಡಿದ್ದು ಬೆಳಗಾವಿಯಲ್ಲಿ ಯುವ ಸಂಗಮ ಸಮಾವೇಶ ಮಾಡುತ್ತಿದ್ದೇವೆ. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುವಕರಿಗೆ ಗ್ಯಾರಂಟಿ ಕೊಡಲಿದ್ದಾರೆ. ಕಾಂಗ್ರೆಸ್ ಭರವಸೆಯನ್ನು ಜನ ನಂಬುತ್ತಾರೆ, ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು. ಇವತ್ತು ಹಿಂದಿನ ಸರ್ಕಾರಗಳ ಆಡಳಿತದ ತುಲನೆಯಾಗುತ್ತಿದೆ, ಯಾವುದು ಒಳ್ಳೆದು ಅಂತ ಹೇಳಿ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ.
ಕೆಎಸ್ಸಾರ್ಟಿಸಿ ಮಾರ್ಗ ಪರವಾನಗಿಯನ್ನು ಖಾಸಗಿ ಮಾಲೀಕರಿಗೆ ಮಾಡಿಕೊಡಲು 50 ಕೋಟಿ ಡೀಲ್ ಮಾಡ್ತಿದ್ದಾರೆಂದು ವದಂತಿ ಇದೆ. ಇದೇ ಮಾರ್ಚ್ 24 ರ ಒಳಗೆ ಮಾಡಬೇಕು ಮಸೂದೆ ತರಬೇಕು ಎಂದಿದ್ದಾರೆ. ಕೆಎಸ್ಸಾರ್ಟಿಸಿ ನಷ್ಟದಿಂದ ಮುಚ್ಚುವ ಹಂತಕ್ಕೆ ತಂದಿಟ್ಟಿದ್ದಾರೆ. ಇದೊಂದು ಕರಾಳ ಮಸೂದೆಯಾಗಿದ್ದು ಯಾರದ್ದೋ ಲಾಭಕ್ಕಾಗಿ ರಾಮುಲು ಕೆಎಸ್ಸಾರ್ಟಿಸಿ ಬಲಿ ಕೊಡಬಾರದು ಎಂದರು.
ಬಿಜೆಪಿ- ಎಸ್ಡಿಪಿಐ ಜೊತೆ ಒಪ್ಪಂದ ಮಾಡಿದೆಯೇ ಹೊರತು ನಾವು ಯಾವುದೇ ಒಳ ಮೈತ್ರಿ ಮಾಡಿಲ್ಲ. ಎಸ್ಡಿಪಿಐ ಮತ್ತು ಬಿಜೆಪಿ ಕೋಮುವಾದಿ ಪಕ್ಷಗಳು. ಎರಡೂ ಸಮಾನ ಮನಸ್ಕರು. ಯಾರು, ಯಾರನ್ನು ದುಡ್ಡು ಕೊಟ್ಟು ಓಟಿಗೆ ನಿಲ್ಲಿಸುತ್ತಾರೆ ಎಂಬುದು ಗೊತ್ತಿದೆ. ಎಸ್ಡಿಪಿಐ ಬೇಕಾದರೆ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿ. ನಾವೇನು ಬೇಡ ಅನ್ನುವುದಿಲ್ಲ ಎಂದರು.
ಸಂತೋಷ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ಪ್ರಕಾಶ್ ಸಾಲ್ಯಾನ್, ಉದಯ ಆಚಾರ್ಯ ಇದ್ದರು.