ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ಮನಸ್ಸು ಬದಲಾಯಿಸಿದ್ದಾರೆ. ಕೋಲಾರ ಬಿಟ್ಟು ಬೇರೆಡೆ ಸ್ಪರ್ಧಿಸುವಂತೆ ಹೈಕಮಾಂಡ್ ಸಲಹೆ ನೀಡಿದ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಬೆಂಗಳೂರಿನ ನಿವಾಸದಲ್ಲಿ ಬೆಂಬಲಿಗರ ಹಾಗೂ ಪಕ್ಷದ ನಾಯಕರ ಜತೆ ಸಭೆ ನಡೆಸಿದ್ದಾರೆ. ಎಲ್ಲಿಂದ ಕಣಕ್ಕಿಳಿಯುವುದು ಎಂಬ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಕೋಲಾರದಿಂದ ಸ್ಪರ್ಧಿಸುವುದು ಅಸಾಧ್ಯ ಎಂಬ ಸುಳಿವನ್ನು ನೀಡಿದ್ದಾರೆ. ಇದರೊಂದಿಗೆ, ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯುವುದಿಲ್ಲ, ಕೊನೇ ಕ್ಷಣದಲ್ಲಿ ಅವರು ವರುಣಾದಿಂದ ಕಣಕ್ಕಿಳಿಯಬಹುದು ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಕೊನೆಗೂ ನಿಜವಾಗಿವೆ.
ಶುಕ್ರವಾರ ನವದೆಹಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿತ್ತು.
ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ನಾನು ಯಾವುದೇ ಒತ್ತಡಕ್ಕೊಳಗಾಗಿಲ್ಲ. ಮಾರ್ಚ್ 22ರಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಒಂದೇ ಹೆಸರಿರುವ ಕಡೆ, ಗೊಂದಲ ಇಲ್ಲದ ಕಡೆ ಟಿಕೆಟ್ ಅಂತಿಮಗೊಳಿಸಲಾಗಿದೆ. ನಾನೂ ಸಹ ಟಿಕೆಟ್ ವಿಚಾರವಾಗಿ ಹೈಕಮಾಂಡ್ಗೆ ಅರ್ಜಿ ಹಾಕಿದ್ದೇನೆ. ವರಿಷ್ಠರು ಒಂದು ಕಡೆಯಿಂದ ಸ್ಪರ್ಧಿಸಲು ಹೇಳುತ್ತಾರೋ, ಮೂರು ಕಡೆಯಿಂದ ಕಣಕ್ಕಿಳಿಯಲು ಹೇಳುತ್ತಾರೋ ಗೊತ್ತಿಲ್ಲ. ವರುಣಾದಲ್ಲಿ ಈಗಾಗಲೇ ಯತೀಂದ್ರ ಇದ್ದಾನೆ. ವರುಣಾದಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಅಲ್ಲಿಂದ, ಕೋಲಾರದಲ್ಲಿ ಹೇಳಿದರೆ ಅಲ್ಲಿಂದ ಕಣಕ್ಕಿಳಿಯುತ್ತೇನೆ. ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು ಎಂದು ಹೇಳಿದ್ದರು.