ಮಂಗಳೂರು: ಕಾಜಿಲ ನಿವಾಸಿ ದೇಜು ಪೂಜಾರಿ ಎಂಬುವರ ಪುತ್ರ ಪವನ್ ಪೂಜಾರಿ(23) ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ಪತ್ತೆಯಾಗಿದೆ.
ಅಜ್ಜಿ ಭೋಜ ಪೂಜಾರಿ ಅವರನ್ನು ನೋಡಿಕೊಂಡು ಬರುವುದಾಗಿ ಮಂಗಳೂರಿನ ಆಸ್ಪತ್ರೆಗೆ ಬಂದಿದ್ದು ಆ ಬಳಿಕ ನಾಪತ್ತೆಯಾಗಿದ್ದ. ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪವನ್ನ ಸ್ನೇಹಿತನ ತಂದೆ ಪವನ್ ತಾಯಿಗೆ ಕರೆ ಮಾಡಿ, ಪವನ್ ತನ್ನ ಬ್ಯಾಗ್ ಅನ್ನು ನಮ್ಮ ಮನೆಯ ಕಾಂಪೌಂಡ್ ಮೇಲೆ ಇಟ್ಟು ಹೋಗಿದ್ದಾನೆ ಎಂದಿದ್ದಾರೆ.
ಪವನ್ ನಾಪತ್ತೆ ಬಗ್ಗೆ ಆತನ ಬಾವ ವಿನೋದ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯವರು ಪವನ್ಗಾಗಿ ಹುಡುಕಾಟ ನಡೆಸುತ್ತಿದ್ದರು, ಆದರೆ ಪವನ್ ಸಿಕ್ಕಿರಲಿಲ್ಲ. ಗುರುಪುರ ಫಲ್ಗುಣಿ ನದಿಯಲ್ಲಿ ಸೇತುವೆಗೆ ಹತ್ತಿರದಲ್ಲಿ ತೇಲುತ್ತಿದ್ದ ಶವ ಪತ್ತೆಯಾಗಿದೆ. ಬಳಿಕ ಪೊಲೀಸರು ಸ್ಥಳೀಯರ ಸಹಾಯದಿಂದ ಶವ ಮೇಲೆತ್ತಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಪವನ್ ಆತ್ಮಹತ್ಯೆಗೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.