ಮೂಡುಬಿದಿರೆ: ಮೂಡುಬಿದಿರೆ-ವೇಣೂರು, ಮೂಡುಬಿದಿರೆ-ಬಿಸಿ ರೋಡ್ ಅನ್ನು ಸಂಪರ್ಕಿಸುವ ಮೆಸ್ಕಾಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಅವೈಜ್ಷಾನಿಕ ವೃತ್ತವನ್ನು ತೆರವು ಮಾಡಬೇಕು ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯಲ್ಲಿ ಮಾತನಾಡಿ, ಶಾಸಕರ ನಿಧಿಯಿಂದ ರೂಪಾಯಿ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ. ಈ ರಸ್ತೆಯಲ್ಲಿ ದಿನಕ್ಕೆ ನೂರಾರು ವಾಹನಗಳು ಓಡಾಡುತ್ತಿದ್ದು, ದೊಡ್ಡ ವೃತ್ತದಿಂದಾಗಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರತಿಭಟನೆ ನಡೆಸಿ ಪುರಸಭೆ, ಪಿಡಬ್ಲ್ಯೂಡಿ ಎಂಜಿನಿಯರ್ ಮತ್ತು ಶಾಸಕರನ್ನು ಎಚ್ಚರಿಸಲಾಗಿದೆ. ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾಗ ಎರಡು ದಿನ ಸಮಯಾವಕಾಶ ಕೇಳಿದ್ದರು. ಆದರೆ ಏನೂ ಪ್ರಗತಿಯಾಗಿಲ್ಲ. 40 ಪರ್ಸಂಟ್ ಕಮಿಷನ್ಗಾಗಿ ಶಾಸಕರ ಮೂಲಕ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ. ತನ್ನ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿ ಗುತ್ತಿಗೆ ನಡೆಸುತ್ತಿರುವ ಶಾಸಕರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಅವೈಜ್ಞಾನಿಕ ವೃತ್ತವನ್ನು ಸರಿಪಡಿಸುವಂತೆ ಖುದ್ದು ನಾನೇ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ನೀಡಿದ್ದೆ. ಎರಡು ದಿನ ಸಮಯಾವಕಾಶ ಕೇಳಿದ್ದ ಜಿಲ್ಲಾಧಿಕಾರಿ ನಂತರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ. ಜನರಿಗಾಗುವ ತೊಂದರೆಯನ್ನು ನೋಡಿ ನಾವು ಸುಮ್ಮನಿರುವುದಿಲ್ಲ. ಶೀಘ್ರದಲ್ಲೆ ಜಿಲ್ಲಾಧಿಕಾರಿ ಕಚೇರಿ ಎದುರು ಮೂಡುಬಿದಿರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅಭಯಚಂದ್ರ ಜೈನ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭೆ ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ರೂಪಾ ಎಸ್. ಶೆಟ್ಟಿ, ಪುರಂದರ ದೇವಾಡಿಗ, ಇಮಾಯುತ್ತಲ್ಲಾ, ಇಕ್ಬಾಲ್ ಕರೀಂ, ಪಕ್ಷದ ಪ್ರಮುಖರಾದ ಜಯ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನಿಲ್, ಅಲ್ವಿನ್ ಮಿನೇಜಸ್ ಇದ್ದರು.