ಬೆಂಗಳೂರು: ದ್ವಿತೀಯ ಪಿಯುಸಿ ಪ್ರಥಮ ಭಾಷೆಯ ಪರೀಕ್ಷೆ ಗುರುವಾರ ನಡೆದಿದ್ದು, ಶೇ 95. 55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,33,797 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. 5,10,026 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 23,771 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ರಾಜ್ಯದಲ್ಲಿ ಎರಡು ಕಡೆ ಅಭ್ಯರ್ಥಿಗಳ ದುರಾಚಾರ ಕಂಡು ಬಂದ ಹಿನ್ನೆಯಲ್ಲಿ ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಬೆಳಗಾವಿಯಲ್ಲಿ ಒಬ್ಬರನ್ನು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಬ್ಬರನ್ನು ಡಿಬಾರ್ ಮಾಡಲಾಗಿದೆ.
ಮಲ್ಲೇಶ್ವರಂನ ಸರಕಾರಿ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿ ಬಂದಿದ್ದರು. ಪ್ರಾಂಶುಪಾಲರು ಹಿಜಾಬ್ ತೆಗೆಯುವಂತೆ ತಿಳಿಸಿದ್ದಾರೆ. ಆದರೆ, ಕಡೆ ಕ್ಷಣದವರೆಗೂ ವಿದ್ಯಾರ್ಥಿನಿ ಹಿಜಾಬ್ ತೆಗೆಯಲು ನಿರಾಕರಿಸುತ್ತಲೇ ಇದ್ದರು. ಪರೀಕ್ಷೆ ಆರಂಭವಾಗುವ ಕೆಲ ನಿಮಿಷ ಮುನ್ನ ಆಕೆಯ ಮನವೊಲಿಸಿ ಹಿಜಾಬ್ ತೆಗೆಸಿ ಪರೀಕ್ಷೆ ಕೇಂದ್ರದೊಳಗೆ ಕಳುಹಿಸಿಕೊಡಲಾಯಿತು. ನಗರದ ಯಾವುದೇ ಭಾಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ನಿರಾಕರಣೆಗೆ ಒಳಗಾದ ಪ್ರಕರಣ ವರದಿಯಾಗಿಲ್ಲ.