ತುಮಕೂರು: ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು ಕೊಟ್ಟಿದ್ದು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸ್ಪಷ್ಟನೆ ನೀಡಿ, ವಿವಾದಕ್ಕೆ ತೆರೆ ಎಳೆದಿದ್ದಾರೆ. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.
ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಪೇಜಾವರ ಶ್ರೀಗಳು, ಯಾರು ಕೂಡ ಯಾವ ಹೇಳಿಕೆಯನ್ನಾದರೂ ಕೊಡಬಹುದು. ಆದರೆ ಹೇಳಿಕೆಯ ಜೊತೆಗೆ ಯುಕ್ತ ಆಧಾರವನ್ನು ಕೊಟ್ರೆ ಆ ಮಾತಿಗೆ ಬೆಲೆ ಇರುತ್ತದೆ. ಆಧಾರ ರಹಿತ ಮಾತಿನಿಂದ ಚರ್ಚೆ ಬೆಳೆಸಿದರೆ ಅದಕ್ಕೆ ಅರ್ಥವಿಲ್ಲ. ಉಡುಪಿ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣ ಮಠದ ಸನ್ನಿಧಾನ ಇರಬಹುದು, ಅಲ್ಲಿನ ಭೂಮಿಯನ್ನು ರಾಮಭೋಜ ಎಂಬ ಅರಸ ದಾನ ನೀಡಿರೋದಕ್ಕೆ ಆಧಾರಗಳಿವೆ ಎಂದು ಹೇಳಿದರು.
ಪೇಜಾವರ ಮಠದ ಹಿಂದಿನ ಸ್ವಾಮೀಜಿ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ ಒಂದು ವಿಚಾರವನ್ನು ತಪ್ಪಾಗಿ ಗ್ರಹಿಸಿ ಅದನ್ನು ಉಡುಪಿಗೆ ಜೋಡಿಸಲಾಗುತ್ತಿದೆ. ಮಧ್ವಾಚಾರ್ಯರ ಕಾಲದಲ್ಲಿ ಆ ರೀತಿಯ ಘಟನೆ ನಡೆದಿತ್ತು. ಆದರೆ ಅದು ಉಡುಪಿಯಲ್ಲಿ ಅಲ್ಲ, ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ. ಗುರುಗಳು ಆ ಕುರಿತು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಘಟನೆ ವಿವರಿಸಿದ್ದಾರೆ.