ಕಾರವಾರ (ಭಟ್ಕಳ): ತಾಲೂಕಿನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ನಾಪತ್ತೆ ಆಗಿದ್ದ ಇಬ್ಬರು ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧನ ಮಾಡಿದ್ದಾರೆ.
ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದ ಹತ್ಯೆ ಸಂಬಂಧ ಆರೋಪಿಗಳಾದ ಶ್ರೀಧರ್ ಭಟ್ ಹಾಗೂ ವಿನಯ್ ಭಟ್ ಎಂಬುವವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ಗ್ರಾಮದ ನಿವಾಸಿ ಶಂಭು ಭಟ್ ಹಾಗೂ ಶ್ರೀಧರ್ ಭಟ್ ಕುಟುಂಬದ ನಡುವೆ ಗಲಾಟೆ ಉಂಟಾಗಿತ್ತು.
ಹಿರಿಯ ಮಗ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ಬೆನ್ನಲ್ಲೇ ಆತನ ಪತ್ನಿ ವಿದ್ಯಾ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದರಿಂದ ಸಾಕಷ್ಟು ಬಾರಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಶಂಭು ಭಟ್ಟ ತಮ್ಮ 6 ಎಕರೆ ಆಸ್ತಿಯಲ್ಲಿ ತಮ್ಮ ಹೆಣ್ಣುಮಕ್ಕಳಿಗೂ ಸೇರಿ ಪಾಲು ಹಂಚಿಕೆ ಮಾಡಿದ್ದು ವಿದ್ಯಾಳಿಗೆ 1. 9 ಗುಂಟೆ ನೀಡಿದ್ದರು. ಆದರೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ನೀಡಿದ ಬಗ್ಗೆ ವಿದ್ಯಾ ಮನೆಯವರು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದ್ದು, ಶುಕ್ರವಾರ ಗಲಾಟೆ ತಾರಕಕ್ಕೇರಿತ್ತು.
ಶ್ರೀಧರ್ ಭಟ್ ಹಾಗೂ ಅವರ ಮಗ ವಿನಯ ಭಟ್ ಮಾರಕಾಸ್ತ್ರದಿಂದ ಶಂಭು ಭಟ್, ಅವರ ಪತ್ನಿ ಮಾದೇವಿ ಭಟ್, ಪುತ್ರ ರಾಘು ಭಟ್ ಹಾಗೂ ಸೊಸೆ ಕುಸುಮಾ ಭಟ್ ಎಂಬುವವರನ್ನು ಮನೆಯ ಆವರಣದಲ್ಲೇ ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಕುಮ್ಮಕ್ಕಿನಿಂದಲೇ ಕೃತ್ಯ ನಡೆದಿದ್ದಾಗಿ ಶಂಭು ಭಟ್ ಪುತ್ರಿ ಜಯಾ ಅಡಿಗ ಎಂಬುವರು ಮೂವರ ವಿರುದ್ಧ ದೂರು ದಾಖಲಿಸಿದ್ದರು.
ವಿದ್ಯಾ ವಶಕ್ಕೆ ಪಡೆದಿದ್ದ ಪೊಲೀಸರು ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದದ್ದರು. ಆರೋಪಿಗಳು ಶಿವಮೊಗ್ಗ ಬಳಿ ಪತ್ತೆಯಾಗಿದ್ದು, ಅದರಂತೆ ಭಟ್ಕಳ ಡಿವೈಎಸ್ಪಿ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.