ಮಣಿಪಾಲ: ಬೈಂದೂರು ತಾಲೂಕಿನ ಮರವಂತೆ ಬಳಿ ನಡೆದ ರಸ್ತೆ ಅಪಘಾತದಿಂದಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸನ್ನ ಅವರ ಪತ್ನಿ ಶಿಲ್ಪಾ ಮಾಧವ ಅವರು ಮೃತಪಟ್ಟಿದ್ದಾರೆ. ಆದರೆ ಅವರು ಸಾವಿನಲ್ಲಿಯೂ 6 ಮಂದಿಗೆ ಅವರ ಅಂಗಾಂಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕು ಮೂಡಿಸಿದ್ದಾರೆ.
ಮೃತರ ಕುಟುಂಬದ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಎರಡು ಮೂತ್ರಪಿಂಡ, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾವನ್ನು ಅಗತ್ಯವಿದ್ದ ರೋಗಿಗಳಿಗೆ ಜೋಡಣೆ ಮಾಡಲಾಗುತ್ತಿದೆ. ಬಳಸಲಾಗಿದೆ.
ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ ಯಕೃತ್, ಮಂಗಳೂರಿನ ಎಜೆ ಆಸ್ಪತ್ರೆಗೆ ಮೂತ್ರಪಿಂಡ ಎರಡು ಕಾರ್ನಿಯಾ, ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ನೋಂದಾಯಿತ ರೋಗಿಗಳಿಗೆ ಒಂದು ಮೂತ್ರಪಿಂಡ ಹಾಗೂ ಚರ್ಮವನ್ನು ಬಳಸಲಾಗುತ್ತಿದೆ ಎಂದು ಮಣಿಪಾಲದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಅಪಘಾತದಲ್ಲಿ ಶಿಲ್ಪಾ ಅವರ ಪತಿ ಪ್ರಸನ್ನ ಕೂಡ ತೀವ್ರ ತೆರವಾದ ಗಾಯಗಳಾಗಿದ್ದವು. ವೈದ್ಯರು ಶಿಲ್ಪಾ ಅವರನ್ನು ಬದುಕಿಸಲು ನಡೆಸಿದ ಯತ್ನಗಳು ವಿಫಲಗೊಂಡು ಮಿದುಳು ನಿಷ್ಕ್ರಿಯಗೊಂಡಿತ್ತು. ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಮಹಿಳೆ ದೇಹಸ್ಥಿತಿಯನ್ನು ಎರಡು ಬಾರಿ ಪರಿಶೀಲಿಸಿ ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು.
ಪತಿ ಪ್ರಸನ್ನ ಕುಮಾರ್ ಹಾಗೂ ಕುಟುಂಬ ಸದಸ್ಯರ ಅಪೇಕ್ಷಯಂತೆ ಶಿಲ್ಪಾ ಅವರ ಅಂಗಾಂಗಳನ್ನು ರೋಗಿಗಳಿಗೆ ದಾನ ಮಾಡಲಾಯಿತು. ಅಂಗಾಂಗ ದಾನದ ಉದಾತ್ತ ನಿರ್ಧಾರದ ಮೂಲಕ ಶಿಲ್ಪಾ ಕುಟುಂಬ ಮಾದರಿ ಆಗಿದೆ. ಅವರ ನಡೆ ಅನುಕರಣೀಯವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಅಂಗಾಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸರು ನೆರವಿನೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ವರ್ಗಾಯಿಸಲಾಯಿತು ಎಂದು ತಿಳಿಸಿದ್ದಾರೆ.