ಮಂಗಳೂರ: ಇಲ್ಲಿನ ಚಿತ್ರಾಪುರ ಸಮೀಪದ ಕಡಲ ಕಿನಾರೆಯಲ್ಲಿ ಗಾಂಜಾ ಅಮಲಿನಲ್ಲಿದ್ದ ದುಷ್ಕರ್ಮಿಗಳು, ರಿಕ್ಷಾ ಚಾಲಕ ಸೇರಿ ಗ್ರಾಮಸ್ಥರನ್ನು ತಲವಾರಿನಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ಭಾನುವಾರ ನಡೆದಿದೆ.
ಗಾಂಜಾ ಸೇವಿಸಿ ಈ ಕೃತ್ಯ ಎಸಗಿದ್ದು, ಸುನಿಲ್ ಎಂಬ ರಿಕ್ಷಾ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿ ಅಮನ್ ಎಂಬಾತನನ್ನು ಪೊಲೀಸರು ಸ್ಥಳೀಯರ ಸಹಕಾರದಿಂದ ಬಂಧನ ಮಾಡಿದ್ದಾರೆ. ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಆತನ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಡಲು ಕೊರೆತ ತಡೆಗೆ ಹಾಕಲಾಗಿದ್ದ ಕಲ್ಲುಗಳಲ್ಲಿ ಕಳೆದ ಹಲವು ತಿಂಗಳಿನಿಂದ ಮಾದಕ ವ್ಯಸನಿಗಳು ಅನೈತಿಕವಾದ ದಂಧೆ ನಡೆಸುತ್ತಿದ್ದಾರೆ. ಈ ಕುರಿತು ಸ್ಥಳೀಯರು ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಸೇಡಿನಲ್ಲಿ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸುರತ್ಕಲ್ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪ್ರಕರಣ ದುಷ್ಕರ್ಮಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.