ಕಾರವಾರ (ಮುಂಡಗೋಡ): ಕಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಂಗನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದರು. 15 ದಿನಗಳಿಂದ ನೀರು ಎನ್ನುವ ಕೋಪ ನೆತ್ತಿಗೆರಿತ್ತು. ಕುಡಿವ ನೀರು ಇಲ್ಲದೇ ತರಗತಿಗೆ ಗೈರಾಗಿ ಖಾಲಿ ಕೊಡ ಹಿಡಿದು ಶಿರಸಿ–ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಶಿಂಗನಳ್ಳಿ ಗ್ರಾಮದಲ್ಲಿ ನಡೆಯಿತು.
ನೀರಿನ ಸಮಸ್ಯೆ ಆದಾಗ ಅಲ್ಲಿಯ ಶಾಲಾ ಸಮಿತಿ ಟ್ಯಾಂಕರ್ ಮೂಲಕ ಶಾಲೆಗೆ ಕುಡಿವ ನೀರು ಸರಬರಾಜು ಮಾಡಿದ್ದರು. ನಂತರ ಫೆ.15 ರಂದು ಕಾತೂರ ಗ್ರಾ.ಪಂಗೆ ಮನವಿ ಸಲ್ಲಿಸಿದ್ದರು. ಆದರೆ ಪಂಚಾಯಿತಿ ಆಡಳಿತ ಮೌನ ವಹಿಸಿತ್ತು. ಆಕ್ರೋಶಗೊಂಡ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲಾ ಸಮಿತಿ ಜತೆಯಾಗಿ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ಕುಳಿತು ಸಂಚಾರ ತಡೆ ನಡೆಸಿದರು.
ವಿಷಯ ಗಮನಕ್ಕೆ ಬಂದ ತಕ್ಷಣವೇ ಸಿಆರ್ಪಿ ಮತ್ತು ಇಸಿಒಗಳನ್ನು ಕಳಿಸಿದ್ದೇನೆ. ಈ ಸಮಸ್ಯೆ ಬಗೆಹರಿದಿದೆ. ಶಾಲೆಯಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಬಾರದಿತ್ತು. ಪಾಲಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸದಸ್ಯರು ಶಾಲೆಗೆ ನೀರಿನ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ತಾ.ಪಂ ಇಒ ಅವರ ಗಮನಕ್ಕೆ ತಂದಿದ್ದೇನೆ.
ಎಂದು ಮುಂಡಗೋಡ ಪ್ರಭಾರ ಬಿಇಒ ಅಕ್ಕಮಹಾದೇವಿ ಗಾಣಗೇರ ತಿಳಿಸಿದರು.
ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅರ್ಧ ಗಂಟೆಗಳ ಕಾಲ ಎರಡು ಬದಿಯಲ್ಲಿ ವಾಹನಗಳು ಸಾಲಾಗಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ದೌದಾಯಿಸಿದ ಸಿಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಪ್ರತಿಭಟನಾಕಾರರ ಮನವೊಲಿಸಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಮನವೊಲಿಸಿದರು.