Breaking News

ರಾಜೇಂದ್ರ ಕುಮಾರ್ ನಾಯಕತ್ವ ಗುಣದ ಸಾರಥಿ: ಸ್ವಾಮೀಜಿ

 

ಕರಾವಳಿ ಡೈಲಿನ್ಯೂಸ್

ಮಂಗಳೂರು:ನಾವು ಏನು ಬೇಕಾದರೂ ಮತ್ತೆ ಪಡೆಯಬಹುದು. ಆದರೆ, ಶರೀರ, ಮನುಷ್ಯ ಜನ್ಮವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಸಾಧನೆ ಮಾಡದೇ ಸತ್ತರೆ ಅವಮಾನ, ಹೀಗಾಗಿ ನಾಯಕತ್ವಕ್ಕೆ ಇನ್ನೊಂದು ಹೆಸರು ರಾಜೇಂದ್ರ ಕುಮಾರ್’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶುಕ್ರವಾರ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್‌ ಅವರ 74ನೇ ಜನ್ಮದಿನದ ಪ್ರಯುಕ್ತ ಅಭಿವಂದನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತಾನಾಡಿದರು.

ರಾಜೇಂದ್ರ ಕುಮಾರ್ ಅವರು 74 ನೇ ವಯಸ್ಸಿನಲ್ಲೂ 47 ರ ಯುವಕನಂತೆ ಇದ್ದಾರೆ. ಸಹಕಾರಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಇತರರಿಗೆ ಮಾದರಿ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಅವರಿಗೆ ನಾವೆಲ್ಲರೂ ಜನ್ಮದಿನದ ಶುಭ ಹಾರೈಸೋಣ ಎಂದರು.

ಅಭಿವಂದನಾ ಭಾಷಣ ಮಾಡಿದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, ರಾಜೇಂದ್ರ ಕುಮಾರ್ ಅವರು ಸಾಧಕರ ಸಾಲಿನಲ್ಲಿ ಮೊದಲಿಗರು. ಅವರು ಎಂದಿಗೂ ಅಧ್ಯಕ್ಷ ಎಂಬ ಹಮ್ಮಿನಿಂದ ಮೆರೆಯಲಿಲ್ಲ. ಎಲ್ಲರೊಂದಿಗೆ ಬೆರೆತು ಸರಳತೆ ಪ್ರತೀಕವಾದವರು. ಸಮರ್ಥ ನಾಯಕತ್ವಕ್ಕೆ ಮಾದರಿಯಾಗಿ ತನ್ನ ಸಾಧನೆಯೊಂದಿಗೆ ಜನಪ್ರೇಮವನ್ನು ಹೊಂದಿದ್ದಾರೆ ಎಂದರು.

  1.  

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ನಾವು ಎಲ್ಲೋ ಹುಟ್ಟಿ ಎಲ್ಲೋ ದುಡಿದು ಇನ್ನೆಲ್ಲೋ ಬದುಕು ಕಟ್ಟಿಕೊಳ್ಳುತ್ತೇವೆ. ಆದರೆ, ರಾಜೇಂದ್ರ ಕುಮಾರ್ ಅವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ ದುಡಿದು ಬಳಿಕ ಊರಿಗೆ ಬಂದು ಇಲ್ಲಿನ ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆ ತಂದು ಜನರ ನಾಯಕನಾಗಿ ಬೆಳೆದವರು. ಸಹಕಾರಿ ರಂಗದಲ್ಲಿ ಜಿಲ್ಲೆ, ರಾಜ್ಯ, ದೇಶದುದ್ದಕ್ಕೂ ಅಹರ್ನಿಶಿ ದುಡಿದು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದವರು. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದ್ದರೂ ಅತ್ತ ಹೋಗದೆ ಜನರ ಪರವಾಗಿ ದುಡಿದು ಯಶಸ್ಸು ಕಂಡವರು ಎಂದರು.

ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಮೈಸೂರು ಪೇಟ ಹಾಕಿ ಸನ್ಮಾನಿಸಲಾಯಿತು. 74 ಮಂದಿಗೆ ಹೊಲಿಗೆ ಯಂತ್ರ, ಪರಿಹಾರ ಧನ ಸಹಿತ ವಿವಿಧ ಸವಲತ್ತುಗಳನ್ನು ರಾಜೇಂದ್ರ ಕುಮಾರ್ ಅವರು ವಿತರಿಸಿದರು.

ಅಭಿವಂದನೆ ಸ್ವೀಕರಿಸಿ ಮಾತಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ , ಆ ಜಾತಿ ಈ ಜಾತಿ ಎನ್ನುವುದು ಮುಖ್ಯವಲ್ಲ, ಮಾನವ ಜಾತಿ ಮುಖ್ಯ. ನಾವು ಬದುಕುವುದು ಮುಖ್ಯವಲ್ಲ. ಸಮಾಜದ ದುರ್ಬಲರ ಸಂಕಷ್ಟಗಳಿಗೆ ನೆರವಾಗಿ ಅವರನ್ನೂ ಬದುಕಿಸುವುದು ಮುಖ್ಯ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಮಹಿಳಾ ಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ ಎನ್ನುವುದನ್ನು ಸಹಕಾರಿ ಕ್ಷೇತ್ರದಿಂದ ನಾನು ಕಲಿತಿದ್ದೇನೆ ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಬೇಕು ಆಗಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ನನ್ನನ್ನು ಬೆಳೆಸಿದ್ದೇ ಈ ಸಮಾಜ. ಹೀಗಾಗಿ ಸಮಾಜಕ್ಕೆ ನನ್ನಿಂದ ಏನಾದರೂ ಕೊಡಬೇಕು ಎಂಬ ತುಡಿತ ಸದಾಕಾಲ ನನ್ನಲ್ಲಿ ಜಾಗೃತವಾಗಿರುತ್ತೆ. ನಾನು ನನ್ನದು ಎನ್ನದೆ ನಾನು ನಿಮ್ಮವನು ಎಂದುಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ” ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಅದಾನಿ ಸಂಸ್ಥೆಯ ದಕ್ಷಿಣ ಭಾರತದ ಅಧಿಕಾರಿ ಕಿಶೋರ್ ಆಳ್ವ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಪ್ರಕಾಶ್ ಪಿ. ಎಸ್., ಅಭಿವಂದನಾ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿತೀಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com