ಹಳಿಯಾಳ: ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಕೈ ಬಿಟ್ಟು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾನುವಾರ ಅಧಿಕೃತ ಸೇರ್ಪಡೆ ಆದರು.
ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ಭಾಗದ ನೂರಾರು ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ತೆನೆ ಹೊತ್ತು ಮಹಿಳೆ ಪಕ್ಷ ಹಿಡಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಘೋಟ್ನೆಕರ ಟಿಕೆಟ್ ಬಯಸಿದ್ದರು. ಪಕ್ಷವು ದೇಶಪಾಂಡೆಗೆ ಮಣೆ ಹಾಕಿದ್ದನ್ನು ವಿರೋಧಿಸಿ ಕ್ಷೇತ್ರದ ಕಾರ್ಯಕರ್ತರ ಚರ್ಚಿಸಿ ಜೆಡಿಎಸ್ ಪಕ್ಷಕ್ಕೆ ಜಿಗಿದಿದ್ದಾರೆ.
ದೇಶಪಾಂಡೆ – ಘೋಟ್ನೆಕರ್ ನಡುವೆ ಜಿದ್ದಾಜಿದ್ದಿ ಏರ್ಪಡುವ ಎಲ್ಲ ಲಕ್ಷಣ ಕಾಣುತ್ತಿದೆ. 40 ವರ್ಷಗಳ ಕಾಲ ಜತೆಗಿದ್ದು ಅವರ ವಿರುದ್ಧವೇ ಕಣಕ್ಕೆ ಇಳಿಯುತ್ತಿದ್ದಾರೆ. ದೇಶಪಾಂಡೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದರಿಂದ ಕುಮಾರಸ್ವಾಮಿ ಅವರ ಕಾರ್ಯವೈಖರಿ ಮೆಚ್ಚಿಕೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಘೋಟ್ನೆಕರ ತಿಳಿಸಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ 19 ಚುನಾವಣೆ ಎದುರಿಸಿದ್ದೇನೆ. ಯಾವುದೇ ಚುನಾವಣೆಗಳಲ್ಲಿ ಸೋತ ಇತಿಹಾಸವೇ ಇಲ್ಲ. ಎರಡು ಬಾರಿ ವಿಧಾನ ಪರಿಷತ ಸದಸ್ಯನಾಗಿ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜಕೀಯ ಅನುಭವ ನನಗಿದೆ.
ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಕ್ಷೇತ್ರದ ಎಲ್ಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಗೆಲುವಿಗೆ ಸಹಕರಿಸಬೇಕು ಎಂದು ಘೋಟ್ನೆಕರ ಮನವಿ ಮಾಡಿದರು.