ಮಂಗಳೂರು: ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರು ಆಯವ್ಯಯ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದರು.
ಕುಂದಾಪುರವು ರಾಜ್ಯ, ದೇಶಕ್ಕೆ ವಿವಿಧ ವಿಷಯಗಳಲ್ಲಿ ಅದ್ಬುತ ಕೊಡುಗೆ ನೀಡಿದ ಊರು. ಕುಂದಾಪ್ರ ಭಾಷೆ, ಸಂಸ್ಕೃತಿಯ ವಿಚಾರದಲ್ಲಂತೂ ಇದು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಬೈಂದೂರಿನಿಂದ ಬ್ರಹ್ಮಾವರದವರೆಗೆ, ಇತ್ತ ಬಸ್ರೂರಿನಿಂದ ಹೆಬ್ರಿ ತನಕ ಮಲೆನಾಡು, ಕರಾವಳಿ 300 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಂದ ಕನ್ನಡ ಭಾಷೆಯಲ್ಲೇ ಸ್ಪಷ್ಟವಾಗಿ ಮಾತನಾಡುವ 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂದರು.
ಜನರ ಆಟ ಪಾಠಗಳಲ್ಲಿ, ಕೃಷಿ, ಮೀನುಗಾರಿಕೆ ಚಟುವಟಿಕೆಗಳಲ್ಲಿ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕಂಬಳ, ಕೋಲ, ಹೋಳಿ ಆಚರಣೆಗಳಲ್ಲಿ ಕುಂದಾಪ್ರ ಕನ್ನಡ ಭಾಷೆ ಸೊಬಗು ಕಾಣಸಿಗುತ್ತದೆ. ತಾಲ್ಲೂಕು ಬದಲಾದಾಗ ಕುಲಕಸಬುಗಳಿಗೆ ಅನುಗುಣವಾಗಿ ಕೆಲವು ಶಬ್ದಗಳು ಬದಲಾದರೂ ಕುಂದ ಕನ್ನಡ ಸಮೃದ್ಧಿ ಕಾಣುತ್ತದೆ.
ಒಂದು ಶತಮಾನದಲ್ಲಿ ಕುಂದ ಕನ್ನಡ ಭಾಷೆಯ ಬಳಕೆಗಳ ಸ್ಪಷ್ಟ ದಾಖಲೆ ಸಿಗುತ್ತದೆ. ತಮ್ಮ ಸಾಹಿತ್ಯದಲ್ಲಿ, ಪಾತ್ರಗಳ ಆಡು ಮಾತಿನಲ್ಲಿ, ಕುಂದಾಪ್ರ ಕನ್ನಡವನ್ನೇ ಬಳಕೆ ಮಾಡಿ ವೈದೇಹಿ, ಮಿತ್ರಾ ವೆಂಕಟರಾಜ್, ಗಾಯತ್ರಿ ನಾವಡ, ಮಾಧುರಿಕೃಷ್ಣ, ವರಮಹಾಲಕ್ಷ್ಮೀ ಹೊಳ್ಳ ಮುಂತಾದವರು ಯಶಸ್ವಿಯಾಗಿದ್ದಾರೆ ಎಂದು ಡಾ. ಭಂಡಾರಿ ಸದನದ ಗಮನ ಸೆಳೆದರು.
ರಾಜ್ಯದಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಭಾಷೆಗಳಿಗೇ ಅಕಾಡೆಮಿಗಳು ರಚನೆಯಾಗಿರುವಾಗ, ಬಹು ಸಮುದಾಯದ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ 25 ಲಕ್ಷಕ್ಕೂ ಹೆಚ್ಚು ಜನರ ಹೃದಯ ಭಾಷೆಯಾದ ಕುಂದಾಪುರ ಕನ್ನಡಕ್ಕೆ ಜನರು ಹೋರಾಟಕ್ಕೆ ಇಳಿಯುವ ಮೊದಲೇ ಅಕಾಡೆಮಿ ಸ್ಥಾಪಿಸುವ ಅನಿವಾರ್ಯತೆ ಇದೆ. ಆದ್ದರಿಂದ 25 ಲಕ್ಷ ಜನರ ಆಶಯದಂತೆ ‘ಕುಂದಾಪುರ ಕನ್ನಡ ಭಾಷಾ ಅಕಾಡಮಿ’ ಸ್ಥಾಪಿಸಬೇಕೆಂದು ಸರಕಾರವನ್ನು ಒತ್ತಾಯಸಿದರು.