ಉಡುಪಿ: ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದ ಪಿಟ್ಲೈನ್ ನಂ.7 ರ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಫೆ.13 ದಿಂದ ಮಾರ್ಚ್ 19 ವರೆಗೆ ಒಟ್ಟು 35 ದಿನಗಳ ಕಾಲ ನಡೆಸಲು ಸೆಂಟ್ರಲ್ ರೈಲ್ವೆ ನಿರ್ಧರಿಸಿರುವುದರಿಂದ ಈ ಅವಧಿಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ನಂ.12620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ಮತ್ಸ್ಯಗಂಧ ದೈನಂದಿನ ಎಕ್ಸ್ಪ್ರೆಸ್ ರೈಲು ಫೆ.12 ರಿಂದ ಮಾ.18 ವರೆಗೆ ಪನ್ವೇಲ್ವರೆಗೆ ಮಾತ್ರ ಸಂಚರಿಸಲಿದೆ.
ಅದೇ ರೀತಿ ರೈಲು ನಂ.12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಮತ್ಸ್ಯಗಂಧ ದೈನಂದಿನ ಎಕ್ಸ್ಪ್ರೆಸ್ ರೈಲು ಫೆ.13 ರಿಂದ ಮಾ.19 ವರೆಗೆ ಪನ್ವೇಲ್ ರೈಲು ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.
ಇದರೊಂದಿಗೆ ತಿರುವನಂತಪುರಂ ಸೆಂಟ್ರಲ್ ಹಾಗೂ ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ದೈನಂದಿನ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನ ಫೆ.12ರಿಂದ ಮಾ.18ರವರೆಗಿನ ಪ್ರಯಾಣ ಪನ್ವೇಲ್ನಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿಂದಲೇ ಮರು ಸಂಚಾರ ಪ್ರಾರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.