ಕಾರವಾರ: ದಾಖಲೆ ಇಲ್ಲದೇ ಹಣವನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ವಿಕಾಸ್ ಧೋಕಲೆ ಹಣ ಸಾಗಣೆ ಮಾಡುತ್ತಿದ್ದ ಆರೋಪಿ.
ಫೆ. 5 ರಂದು 8.40 ರ ವೇಳೆಗೆ ಮಡಗಾಂವ್ನಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ತಪಾಸಣೆಗಾಗಿ ಬಂದ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ವಿಕಾಸ ಬಳಿ ಇದ್ದ ಬ್ಯಾಗ್ ನಲ್ಲಿ ಏನಿದೇ ಎಂದು ವಿಚಾರಣೆ ಮಾಡಿದಾಗ ಸರಿಯಾಗಿ ಉತ್ತರ ನೀಡದೆ ಇರುವುದನ್ನು ಕಂಡು ಪರಿಶೀಲನೆ ಮಾಡಿದಾಗ ದಾಖಲೆ ಇಲ್ಲದೇ ಹಣ ಸಾಗಣೆ ಮಾಡುವುದು ಗೊತ್ತಾಗಿದೆ.
ರೈಲ್ವೆ ಪೊಲೀಸರು ಬ್ಯಾಗ್ ಪರಿಶೀಲನೆ ಮಾಡಿದಾಗ 20,09 ಲಕ್ಷ ರೂ. ಪತ್ತೆಯಾಗಿದೆ. ಹಣದ ಕುರಿತು ವಿಚಾರಿಸಿದ ವೇಳೆ ಯಾವುದೇ ದಾಖಲೆ ನೀಡಿಲ್ಲ. ರೈಲ್ವೆ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಉಡುಪಿಯಲ್ಲಿ ರೈಲಿನಿಂದ ಕೆಳಗಿಳಿಸಿ ಬಳಿಕ ಇನ್ನೊಂದು ರೈಲಿನ ಮೂಲಕ ವಾಪಸ್ ಕಾರವಾರಕ್ಕೆ ಕರೆತಂದಿದ್ದಾರೆ.
ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಹಣದ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಆರಂಭಿಸಿಸಿದ್ದಾರೆ.