ಮಂಗಳೂರು: ಸರಕಾರ ಬಜೆಟ್ ನಲ್ಲಿ 3,000 ಕೋಟಿಯನ್ನು ಅಲ್ಪಸಂಖ್ಯಾತರಿಗೆ ನೀಡಬೇಕು. ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 300 ಕೋಟಿ ಮೀಸಲಿಡಬೇಕು. ನಿಗಮಕ್ಕೆ ತಕ್ಷಣವೇ ಅಧ್ಯಕ್ಷರನ್ನು ನೇಮಕ ಮಾಡಬೇಕು. ಕಚ್ಚಾ ತೈಲದ ಬೆಲೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಶೇ 32 ಕಡಿಮೆಯಾಗಿದ್ದು, ದೇಶದಲ್ಲಿ 5 ಪೈಸೆಯೂ ಕಡಿಮೆ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾಂಗ್ರೆಸ್ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2,000 ರೂ. ನೀಡಲಾಗುವುದು ಎಂದರು.
ಮಂಗಳೂರಿನಲ್ಲಿ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರಿ ಪಾರ್ಕ್ ಸ್ಥಾಪನೆ ಮಾಡುವ ಜೊತೆಗೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಮೀನುಗಾರರಿಗೆ ತಲಾ 10 ಲಕ್ಷ ರೂ. ಮೊತ್ತದ ವಿಮಾ ಯೋಜನೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ. ತನಕ ಬಡ್ಡಿ ರಹಿತ ಸಾಲ ಮತ್ತು ದೋಣಿಯನ್ನು ಖರೀದಿಸಲು ಶೇ.25 ಸಹಾಯಧನದಲ್ಲಿ 25 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು ಎಂದರು.
ಕರಾವಳಿ ಪ್ರದೇಶದ ಅಭಿವೃದ್ಧಿ ಮೊದಲ ಆದ್ಯತೆಯಾಗಿದ್ದು, ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೇಲ್ದರ್ಜೆಗೇರಿಸಿ 2,500 ಕೋಟಿ ರೂ. ವಾರ್ಷಿಕ ಬಜೆಟ್ ನೀಡಬೇಕು. ಕಾಂಗ್ರೆಸ್ ಸರಕಾರ ರಚನೆಯಾದ 6 ತಿಂಗಳೊಳಗೆ ಮಲ್ಪೆ ಮೀನುಗಾರಿಕಾ ಬಂದರು, ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತು ಮಂಗಳೂರು ಮೀನುಗಾರಿಕೆ ಬಂದರಿನ ಹೂಳೆತ್ತುವ ಕೆಲಸವನ್ನು ಮಾಡಲಾಗುವುದು ಎಂದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಶುಭೋದ್ ಆಳ್ವ, ಮಾಜಿ ಕಾರ್ಪೊರೇಟರ್ ಸಬಿತಾ, ಸಿ.ಎಂ. ಮುಸ್ತಾಫ, ಸಲೀಂ ಇದ್ದರು.