ಕಾರವಾರ: ಸೀಬರ್ಡ್ ನೌಕಾನೆಲೆ ಸೇರಿದಂತೆ ಕದ್ರಾ ಕೆ.ಪಿ.ಸಿ., ಕೈಗಾದ ಎನ್.ಪಿ.ಸಿ.ಐ.ಎಲ್. ಗಳಲ್ಲಿ ದುಡಿವ ಸ್ಥಳೀಯ ಗುತ್ತಿಗೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ನಿರಂತರ ಹೋರಾಟ ನಡೆಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೀಬರ್ಡ್ನಲ್ಲಿ ದುಡಿವ ಸ್ಥಳೀಯ ಹೊರಗುತ್ತಿಗೆ ಕಾರ್ಮಿಕರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಹೆಚ್ಚುವರಿ ಸಮಯ ದುಡಿದರೂ ಅದಕ್ಕೆ ವಿಶೇಷ ವೇತನ ಸಿಗುತ್ತಿರಲಿಲ್ಲ. ಈ ಬಗ್ಗೆ ಹೋರಾಟ ನಡೆಸಿ ನೌಕಾನೆಲೆ ಅಧಿಕಾರಿಗಳಿಗೆ ಒತ್ತಡ ಹೇರಿದ ಕಾರಣ ಕಾರ್ಮಿಕರಿಗೆ ಪಿ.ಎಫ್., ಇಎಸ್ಐ ಸೌಲಭ್ಯಗಳು ಸಿಗುತ್ತಿವೆ ಎಂದು ಹೇಳಿದರು.
ಬೈತಖೋಲದ ಲೇಡಿಸ್ ಬೀಚ್ಅನ್ನು ನೌಕಾನೆಲೆಗೆ ನೀಡದಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. 169.22 ಎಕರೆ ಜಾಗ ಈಗಲೂ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಆದರೆ ಅಲ್ಲಿ ಗುಡ್ಡದ ಸುತ್ತ ನೌಕಾನೆಲೆಯವರು 20 ಮೀಟರ್ ಅಗಲದ ರಸ್ತೆ ನಿರ್ಮಿಸಿದ್ದಾರೆ. ಭೂಕುಸಿತ ಸಂಭವಿಸುವ ಅಪಾಯ ಎದುರಾಗಿದ್ದು, ಈ ಭಾಗದ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಕಾಮಗಾರಿ ನಡೆಸಿದ ಜಾಗ ಅರಣ್ಯೇತರ ಜಾಗವೇ ಅಥವಾ ಅರಣ್ಯ ಭೂಮಿಯೇ ಎಂಬುದನ್ನು ಪ್ರಶ್ನಿಸಿದರೂ ನೌಕಾದಳದವರು ಸ್ಪಷ್ಟಪಡಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಮುಖರಾದ ಕೆ.ಶಂಭು ಶೆಟ್ಟಿ, ಜಿ.ಪಿ.ನಾಯಕ, ಅನಿಲ ನಾಯ್ಕ, ರಾಜೇಶ ಮಾಜಾಳಿಕರ್, ಸುವಿಧಾ ಉಳ್ವೇಕರ್, ಸ್ನೇಹಲ್ ಹರಿಕಂತ್ರ ಇದ್ದರು.