ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಜತೆಗೆ ಪಕ್ಷ ಬಲರ್ಧನೆಗೆ ಕರಾವಳಿ ಭಾಗದಲ್ಲಿ ಇದೇ 5 ರಿಂದ 9 ರವರೆಗೆ ಕರಾವಳಿ ಧ್ವನಿ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾತ್ರೆ ಹಮ್ಮಿಕೊಳ್ಳುವ ಹಿನ್ನಲೆಯಲ್ಲಿ ಮುಖಂಡರ ಜತೆ ಸಭೆ ನಡೆಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಯ 26 ಕ್ಷೇತ್ರಗಳಿಗೆ ಯಾತ್ರೆ ಭೇಟಿ ನೀಡಲಿದೆ. ಕರಾವಳಿ ಧ್ವನಿ ಯಾತ್ರೆ ಇದೇ 5 ರಂದು ಸುಳ್ಯದಿಂದ ಆರಂಭಗೊಂಡು 6 ರಂದು ಮೂಡಬಿದಿರೆ, 7 ರಂದು ಕಾಪು, 8 ರಂದು ಕುಂದಾಪುರ, 9 ರಂದು ಶೃಂಗೇರಿ ತಲುಪಲಿದೆ ಎಂದರು.
ಈ ಬಾರಿಯ ಬಜೆಟ್ ನಲ್ಲಿಯೂ ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ. ಪರಿಣಾಮ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕೇಂದ್ರ ಸರಕಾರ ಕಾರಣವಾಗಿದೆ. ಇದರ ಜತೆಗೆ ಜನರ ಅಭಿವೃದ್ಧಿ, ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗುವ ಬದಲು ಸಮಸ್ಯೆ ಹುಟ್ಟು ಹಾಕಿದೆ ಎಂದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜನರ ಕೈಗೆ ಉದ್ಯೋಗ ನೀಡಿ ಬಡತನ ನಿರ್ಮೂಲನೆ ಗೆ ಹಾಕಿಕೊಟ್ಟ ಉದ್ಯೋಗ ಭರವಸೆ ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ಕಡಿತಗೊಳಿಸಿದೆ. ರಾಜ್ಯ ಸರಕಾರ ಕಮಿಷನ್ ದಂದೆಯಲ್ಲಿ ತೊಡಗಿದೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರ ಬಳಿ ಮತ ಕೇಳುವ ನೈತಿಕತೆ ಹಕ್ಕು ಇಲ್ಲ ಎಂದರು.
ಕಾಂಗ್ರೆಸ್ ಈ ಬಾರಿ ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿದೆ. ಪಕ್ಷದ ನಾಯಕರ ಮೇಲಿನ ಅಸಮಾಧಾನದಿಂದ ಡಾ. ಜಿ. ಪರಮೇಶ್ವರ್ ಅವರು ಪ್ರಣಾಳಿಕೆ ಸಮಿತಿ ರಾಜೀನಾಮೆ ನೀಡಿರುವ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಪರಮೇಶ್ವರ್ ಮುನಿಸಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಅವರು ರಾಜೀನಾಮೆ ಕೂಡ ಕೊಟ್ಟಿಲ್ಲ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್, ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಜೆ.ಆರ್. ಲೋಬೊ, ಐವನ್ ಡಿ ಸೋಜ, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಮಮತಾ ಗಟ್ಟಿ, ನವೀನ್ ಡಿ ಸೋಜ ಇದ್ದರು.