ಪುತ್ತೂರು: ನಾಯಿ ಕಾರಿನ ಬಂಪರ್ ನೊಳಗೆ 70 ಕಿಲೋ ಮೀಟರ್ ಪ್ರಯಾಣಿಸಿ ಸುರಕ್ಷಿತವಾಗಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ನಡೆದಿದೆ.
ಪುತ್ತೂರು ಸಮೀಪದ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪುತ್ತೂರಿಗೆ ವಾಪಸ್ ಆಗುತ್ತಿದ್ದ ವೇಳೆ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಸುಬ್ರಹ್ಮಣ್ಯ ಅವರು ತಕ್ಷಣವೇ ಕಾರನ್ನು ನಿಲ್ಲಿಸಿ ಕಾರಿನ ಸುತ್ತಲು ನಾಯಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ನಾಯಿ ಕಾಣಲಿಲ್ಲ. ಕಾರಿಗೆ ಡಿಕ್ಕಿ ಹೊಡೆದ ನಾಯಿ ಅಲ್ಲಿಂದ ಎಲ್ಲಿ ಹೋಯಿತು ಎಂಬುದು ಅವರಿಗೂ ತಿಳಿಯಲಿಲ್ಲ.
ಕಬಕದ ಮನೆಗೆ ಬಂದ ಸುಬ್ರಹ್ಮಣ್ಯ ದಂಪತಿ ಕಾರನ್ನು ಪರಿಶೀಲಿಸಿದಾಗ ಬಂಪರ್ ಗ್ರಿಲ್ ತುಂಡಾಗಿರುವುದು ಕಂಡು ಬಂತು. ತುಂಡಾದ ಗ್ರಿಲ್ ಸಂದಿಯಿಂದ ಬಂಪರೊಳಗೆ ನಾಯಿ ಇರುವುದು ಕಂಡು ಬಂತು. 70 ಕಿಲೋಮೀಟರ್ ಹಿಂದೆ ಕಾರಿಗೆ ಡಿಕ್ಕಿ ಹೊಡೆದ ನಾಯಿ ಬಂಪರ್ ರೊಳಗೆ ಇತ್ತು.
ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿದ ಸುಬ್ರಹ್ಮಣ್ಯ ಅವರು ನಾಯಿಯನ್ನು ಹೊರ ತೆಗೆಯಲು ವಿನಂತಿಸಿದರು. ಗ್ಯಾರೇಜ್ ನವರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಪರ್ ಬಿಚ್ಚಿ ನಾಯಿ ಸುರಕ್ಷಿತವಾಗಿ ಕಾರಿಂದ ಹೊರಗೆ ಬರುವಂತೆ ಮಾಡಲಾಯಿತು. 70 ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂತು. ನಾಯಿಗೆ ಯಾವುದೇ ಗಾಯಗಳಾಗಿಲ್ಲ ಎನ್ನುವುದು ಸಮಾಧಾನದ ವಿಷಯ.