ಕಾರವಾರ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಈ ಒಂದು ನಿರ್ಧಾರವೂ ಅವರ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಕೊಟ್ಟಿತಾ? ರಾಜಕಾರಣದ ಸಹವಾಸವೇ ಬೇಡ ಎಂಬ ದೊಡ್ಡ ತೀರ್ಮಾನಕ್ಕೆ ಬಂದು ಬಿಟ್ರಾ. ಹೌದು ಈ ಎಲ್ಲ ಕುತೂಹಲಗಳಿಗೆ ಅವರ ಸಾಮಾಜಿಕ ಜಾಲತಾಣದ ಮಾತುಗಳೇ ಸಾಕ್ಷಿಕರಿಸಿವೆ.
ಆನಂದ ಅಸ್ನೋಟಿಕರ್ ಅವರು ಪ್ರಸ್ತಕ್ತ ಮುಂಬರುವ ಚುನಾವಣೆಯ ಹೊತ್ತಲ್ಲಿಯೇ ಶಸ್ತ್ರ ತ್ಯಾಗ ಮಾಡಿದ್ದಾರೆ. ನಾನು ಇನ್ನೂ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ತಮ್ಮ ಬೆಂಬಲಿಗರಿಗೆ ಶಾಕ್ ನೀಡಿದ್ದಾರೆ. ನಿಮಗೆ ಯಾರೂ ಸಮರ್ಥ ಎಂದು ಅನಿಸುತ್ತಾರೋ ಅವರಿಗೆ ಮತ ಹಾಕಿ ಎನ್ನುವ ಮೂಲಕ ತಟಸ್ಥವಾಗಿಯೇ ಉಳಿಯೋದಕ್ಕೆ ನಿರ್ಧರಿಸಿದಂತಿದೆ.
ಒಂದು ಕಾಲದಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ ಆನಂದ ಅಸ್ನೋಟಿಕರ್ ಅವರು ಆರ್ ವಿ. ದೇಶಪಾಂಡೆ ಅವರಿಗೆ ಪರ್ಯಾಯ ರಾಜಕಾರಣಿ ಆಗಿ ಬೆಳೆದು ನಿಂತಿದ್ದರೂ. ತಮ್ಮದೇ ವರ್ಚಸ್ಸಿನ ಮೂಲಕ ಮತ ಬ್ಯಾಂಕ್ ಹೊಂದಿದ್ದರು. ಕಳೆದ ಬಾರಿಯ ಚುನಾವಣಾ ಸೋಲು ಅವರನ್ನು ಕಂಗೆಡಿಸಿದ್ದು, ಕ್ಷೇತ್ರದಿಂದಲೇ ದೂರ ಸರಿಯುವಂತೆ ಮಾಡಿ ಬಿಟ್ಟಿದೆ.
ಆನಂದ ಅಸ್ನೋಟಿಕರ ಅವರ ಈ ನಿರ್ಧಾರವೂ ಹಾಲಿ ಬಿಜೆಪಿ ಶಾಸಕ ರೂಪಾಲಿ ನಾಯ್ಕ್ ಅವರ ಗೆಲುವಿನ ಹಾದಿಗೆ ಸುಲಭ ಆಯಿತೇ? ಎಂಬ ವ್ಯಾಪಕ ಚರ್ಚೆಯ ಕ್ಷೇತ್ರದಲ್ಲಿ ಶುರುವಾಗಿದೆ. ಒಂದು ಮೂಲದ ಪ್ರಕಾರ ಹೌದು ಕೂಡ. ಕಳೆದ ಬಾರಿ ಚುನಾವಣೆಯಲ್ಲಿ ರಾಜಕೀಯ ಎದುರಾಳಿ ಆಗಿದ್ದ ರೂಪಾಲಿ ನಾಯ್ಕ್ ಹಾಗೂ ಅಸ್ನೋಟಿಕರ್ ಮತ್ತೆ ಎದುರಾಳಿ ಆಗುತ್ತಾರೆ ಎಂಬ ಚರ್ಚೆ ನಡೆದಿತ್ತು. ಆನಂದ ಅಸ್ನೋಟಿಕರ್ ಸ್ಪರ್ಧೆ ಮಾಡಿದ್ದರೆ ಬಿಜೆಪಿಗೆ ಗೆಲುವು ಸ್ವಲ್ಪ ಕಷ್ಟ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹಾಗಲ್ಲ, ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗಿದೆ.
ನನ್ನ ಬೆಂಬಲಿಗರಿಗೆ, ಕಾರವಾರ-ಅಂಕೋಲಾ ಕ್ಷೇತ್ರದ ಮತದಾರರಿಗೆ ವಿನಂತಿ ಮಾಡುತ್ತಿದ್ದೇನೆ. ನಾನು ಖಾಸಗಿ ವಾಹಿನಿ ನಡೆಸುವ ಚುನಾವಣೆ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ. ನೀವು ಯಾವ ಅಭ್ಯರ್ಥಿಗೆ ಮತಹಾಕಬೇಕು ಎನ್ನುವುದು ನಿಮಗೆ ಬಿಟ್ಟ ವಿಚಾರ ಎಂದು ಸಾಮಾಜಿಕ ಜಾಲತಾಣದ ಮೂಲಕ ಆನಂದ ಅಸ್ನೋಟಿಕರ ಬೆಂಬಲಿಗರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಇದೂ ಅಸ್ನೋಟಿಕರ ಬೆಂಬಲಿಗರಿಗೆ ಸ್ವಲ್ಪ ಬೇಸರ ಕೂಡ ತರಿಸಿದೆ. ಚುನಾವಣೆ ಹೊತ್ತಲ್ಲೆ ಮತ್ತೆ ಯಾವ ತಿರುವುಗಳ ಆಗುತ್ತವೋ ಕಾದು ನೋಡಬೇಕು.