ಮಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿಗಾಗಿ ಎಷ್ಟೊಂದು ಅನುದಾನವನ್ನು ಖರ್ಚು ಮಾಡಲಾಗುತ್ತಿದೆ. ಆದರೆ, ನಾವು ಕಾಣುತ್ತಿರುವ ಅಭಿವೃದ್ಧಿ ಎಷ್ಟು ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ನಮ್ಮ ದುರಾಸೆ ರೋಗ ಎಲ್ಲೆಡೆ ವ್ಯಾಪಿಸುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಅಡ್ಯಾರ್ನಲ್ಲಿ ಏರ್ಪಡಿಸಿದ್ದ ರೋಟರಿ ಜಿಲ್ಲೆ 3181ರ ಮೂರು ದಿನಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಹೆಸರಲ್ಲಿ ನಾವು ಯಾವ ದಿಕ್ಕಿನತ್ತ ಸಾಗುತ್ತಿದ್ದೇವೆ ಎಂಬ ಬಗ್ಗೆ ತೀಕ್ಷ್ಣವಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಸರ್ಕಾರದಿಂದ ಮಂಜೂರಾಗುವ ಅನುದಾನದಲ್ಲಿ ಅಭಿವೃದ್ಧಿಗಾಗಿ ಬಳಕೆಯಾಗುತ್ತಿರುವ ಪ್ರಮಾಣ ಎಷ್ಟು, ಎಂಬಿತ್ಯಾದಿ ವಿಷಯಗಳನ್ನು ತಿಳದಾಗ ತುಂಬಾ ಬೇಸರ ಆಗುತ್ತದೆ. ಜನರಲ್ಲಿ ಜಾಗೃತಿ ಮೂಡಬೇಕಾದ ಅನಿವಾರ್ಯತೆ ಇದೆ ಎಂದರು.
ಅಂತರ ರಾಷ್ಟ್ರೀಯ ರೋಟರಿ ನಿಯೋಜಿತ ನಿರ್ದೇಶಕ ರಾಜು ಸುಬ್ರಮಣಿಯನ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಪ್ರಾಸ್ತಾವಿಕ ಮಾತನಾಡಿದರು. ಸಮಾವೇಶ ಸಮಿತಿ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ರಿತೇಶ್ ಬಾಳಿಗ ವಂದಿಸಿದರು.
ರೋಟರಿ ಅಂತರ ರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿ ರಶ್ಮಿ ಕುಲಕರ್ಣಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್, ಪ್ರಮುಖರಾದ ಸುನಿಲ್ ಝಕರಿಯಾ, ಅಭಿನಂದನ್ ಶೆಟ್ಟಿ, ಎಚ್.ಆರ್.ಕೇಶವ, ವಿಕ್ರಮ್ ದತ್ತಾ, ರಂಗನಾಥ ಭಟ್, ಶೇಖರ ಶೆಟ್ಟಿ, ಕೆ.ಆರ್. ರವೀಂದ್ರನ್, ರಾಮಕೃಷ್ಣ, ಬಿ.ಪ್ರಕಾಶ್ ಬಾಳಿಗ, ಕೃಷ್ಣ ಶೆಟ್ಟಿ, ಡಾ.ಆತ್ಮರಂಜನ್ ರೈ, ನಾರಾಯಣ ಪಿ.ಎಂ., ಅಶ್ವಿನಿ ಕುಮಾರ್ ರೈ, ಕೆ.ನಾರಾಯಣ ಹೆಗ್ಡೆ, ವಿಶ್ವಾಸ್ ಶೆಣೈ, ರಾಜೇಂದ್ರ ಕಲ್ಭಾವಿ, ರಾಮಣ್ಣ ರೈ ಇದ್ದರು.