ಸಿರಸಿ: ತಾಲ್ಲೂಕಿನ ಎಕ್ಕಂಬಿ ಗ್ರಾಮದ ಕೆರೆ ಸಂರಕ್ಷಿಸಿ. ಈ ಕೆರೆ ಹೂಳೆತ್ತಿ ನೀರು ತುಂಬಿಸಲು ಅವಕಾಶ ನೀಡುವಂತೆ ಭಿತ್ತಿಪತ್ರ ಹಿಡಿದು ಬಿಸಲಕೊಪ್ಪ ಸೂರ್ಯ ನಾರಾಯಣ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯ ಎಕ್ಕಂಬಿಯಲ್ಲಿ ಶಿರಸಿ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೊಡ್ಡ ಕೆರೆ ಇದ್ದು, ನಿರ್ವಹಣೆ ಕೊರತೆಯಿಂದ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ವಿಜ್ಞಾನ ಪಾಠದಿಂದ ಪ್ರಭಾವಿತರಾಗಿರುವ ವಿದ್ಯಾರ್ಥಿಗಳು ತಮ್ಮೂರಿನ ಕೆರೆ ಸಂರಕ್ಷಣೆಗೆ ಈ ಹಾದಿ ಹಿಡಿದಿದ್ದೇವೆ. ಕೆರೆ ಅಭಿವೃದ್ಧಿ ಪಡಿಸಲು ಗ್ರಾಮಸ್ಥರು ಮುಂದಾದರೆ, ನಾವೂ ಅಳಿಲು ಸೇವೆ ನೀಡಲು ಸಿದ್ಧರಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.