ಮಂಗಳೂರು: ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಲು ಹಲ್ಲು ಅತೀ ಅಗತ್ಯ. ಹೇಗಾದರು ಬಿದ್ದು ಹೋಗುವ ಹಲ್ಲು ಎಂಬ ಧೋರಣೆ ತಪ್ಪು. ಶಾಶ್ವತ ಹಲ್ಲಿನಷ್ಟೆ ಪ್ರಾಮುಖ್ಯತೆ ಹಾಲು ಹಲ್ಲಿಗೂ ನೀಡಬೇಕು ಎಂದು ಮಂಗಳೂರು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.
ಸೋಮೇಶ್ವರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಶಾಲೆಯಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ದಂತ ಮಾಹಿತಿ ಶಿಬಿರ ಮತ್ತು ಟೂತ್ ಪೇಸ್ಟ್ ವಿತರಣ ಸಮಾರಂಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳ ಮಾತು, ಬೆಳವಣಿಗೆಗೆ, ಆತ್ಮವಿಶ್ವಾಸ ವೃದ್ಧಿಸಲು ಮತ್ತು ಮುಖದ ಸ್ನಾಯುಗಳ ಹಾಗೂ ಎಲುಬುಗಳ ಪರಿಪೂರ್ಣ ಬೆಳವಣಿಗೆಗೆ ಹಾಲು ಹಲ್ಲು ಅತ್ಯಂತ ಅನಿವಾರ್ಯ. ಈ ಕಾರಣದಿಂದ ಹಾಲು ಹಲ್ಲುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹಲ್ಲುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹೆತ್ತವರು ಮತ್ತು ಶಿಕ್ಷಕರು ಸಹಕರಿಸಬೇಕು ಎಂದರು.
ಶಾಲೆಯ 55 ಮಕ್ಕಳಿಗೆ ಉಚಿತವಾಗಿ ಮಾಹಿತಿ ಕರಪತ್ರ ಮತ್ತು ಟೂತ್ ಪೇಸ್ಟ್ ನೀಡಿ, ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಸಹಶಿಕ್ಷಕ ಮಂಜುನಾಥ್. ಎನ್, ಅತಿಥಿ ಶಿಕ್ಷಕರಾದ ಅಂಕಿತಾ ಮತ್ತು ಪ್ರೀಯ ಇದ್ದರು.