ಕಾರವಾರ: ನಿಜ ಶರಣ ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದ ಶಿವಶರಣರು ಹಾಗೂ ವಚನಕಾರರಾಗಿದ್ದು, ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು ಎಂದು ವಿಧಾನ ಪರಿಷತ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.
ಜಿಲ್ಲಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ರವರ ವ್ಯಕ್ತಿತ್ವವನ್ನು ನಾವೆಲ್ಲರು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ತಹಶೀಲ್ದಾರ ಆರ್.ವಿ. ಕಟ್ಟಿ ಅವರು ಮಾತನಾಡಿ ರಾಮಚಂದ್ರ ಕುಟುಂಬ ಸಮೇತ ಚೌಡಯ್ಯನವರ ದೋಣಿಯಲ್ಲಿ ನದಿ ದಾಟುತ್ತಿರುವಾಗ ನಡೆದ ಪ್ರಸಂಗವನ್ನು ಮಾರ್ಮಿಕವಾಗಿ ವಿವರಿಸಿದರು.
ಪ್ರಾಧ್ಯಾಪಕರು ಡಾ: ಮಂಜುನಾಥ ಎನ್. ಅಂಬಿಗ ರವರು ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಂ, ಅಂಬಿಗ ಸಮಾಜದ ಹಿರಿಯರಾದ ದೇವರಾಯ ಹಾಗೂ ಹುವಾ ಕಂಡೇಕರ, ದೈಹಿಕ ಶಿಕ್ಷಕ ಮಹಾದೇವ ಎಲ್ ಹಾಗೂ ವಿದ್ಯಾರ್ಥಿಗಳು ಇದ್ದರು.