ಹುಬ್ಬಳ್ಳಿ: ಹಗಲು ರಾತ್ರಿ ದುಡಿಯುವ ಗುಣ ಬಂಟರ ಏಳಿಗೆಗೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ವತಿಯಿಂದ ಆಯೋಜಿಸಿದ್ದ ಬ್ರಹ್ಮಕಲಸೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಟರು ಎಲ್ಲಿ ಹೋದರು ಉದ್ಯೋಗ ಕಂಡುಕೊಳ್ಳುವ ಕೆಲಸ ಮಾಡುತ್ತಾರೆ. ಎಲ್ಲಿಯೇ ಇದ್ದರೂ ಸಮಾಜದ ಹೆಸರು ಉಳಿಸುವ ಕೆಲಸ ಮಾಡುತ್ತಾರೆ ಎಂದರು.
ಎಲ್ಲಿದ್ದರೂ ಊರು, ದೈವ ಮರೆಯೋಲ್ಲ: ತಾವು ಅಮೆರಿಕಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ದೋಸೆ ತಿನ್ನಬೇಕೆಂದು ಉಡುಪಿ ಹೋಟೆಲ್ ಹುಡುಕಿಕೊಂಡು ಹೋಗಿದ್ದನ್ನು ಸ್ಮರಿಸಿದ ಮುಖ್ಯ ಮಂತ್ರಿ ಬಂದ್ ಆಗಿರುವ ಬಾರ್ ಗಳ ಪರವಾನಾಗಿಯನ್ನು ತೆಗೆದುಕೊಂಡು ಅಭಿವೃದ್ದಿ ಮಾಡುವುದು ಬಂಟರ ಸ್ವಭಾವ ಎಂದರು.
ಎಂಟೆದೆ ಬಂಟ ಎಂಬ ಮಾತಿಗೆ ತಕ್ಕಂತೆ ಬಂಟರು ಇದ್ದಾರೆ: ಕನ್ನಡಿಗರಾಗಿ ಕನ್ನಡಿಗರಿಗೆ ಉದ್ಯೋಗ ನೀಡಿರುವ ಬಂಟರು, ಎಷ್ಟೇ ಬೆಳೆದರೂ ತಮ್ಮ ಊರು ಮರೆಯುವುದಿಲ್ಲ. ಎಲ್ಲಿದ್ದರೂ ತಮ್ಮ ದೈವವನ್ನು ಮರೆಯುವುದಿಲ್ಲ. ಊರಿನಲ್ಲಿ ಹೆಸರು ಮರ್ಯಾದೆ ಗಳಿಸುವುದು ಹೆಮ್ಮೆಯ ವಿಷಯ ಎಂದರು.
ಕನ್ನಡ ನಾಡಿಗೆ ಬಂಟರ ಕೊಡುಗೆ ದೊಡ್ಡದು : ನಿಮ್ಮ ಊರುಗಳಲ್ಲಿ ದಾನ ಧರ್ಮ ಮಾಡಲು ಖುಷಿ ಪಡುವ ಬಂಟರು ಸಮುದಾಯ ಆರೋಗ್ಯ ಕ್ಷೇತ್ರ, ಗುತ್ತಿಗೆ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ನನಗೆ ಈ ಸಮಾಜದ ಬಗ್ಗೆ ಬಹಳ ಪ್ರೀತಿ ವಿಶ್ವಾಸ ಇದೆ. ನಿಮ್ಮ ಪ್ರೀತಿಯ ಊಟ ನನ್ನ ಹೊಟ್ಟೆಯನ್ನು ತುಂಬಿಸಿದೆ.
ಕನ್ನಡ ನಾಡಿಗೆ ಬಂಟರ ಕೊಡುಗೆ ದೊಡ್ಡದಿದೆ. ನಾನು ನಿಮ್ಮವ ನಾನು ಸಿಎಂ ಆಗಿ ಬಂದಿಲ್ಲ. ಈ ಸಮಾಜದ ಸ್ನೇಹಿತನಾಗಿ ನಿಮ್ಮವನಾಗಿ ಬಂದಿದ್ದೇನೆ. ಎಲ್ಲರೂ ಒಟ್ಟಾಗಿ ಬೆಳೆದು ಒಟ್ಟಾಗಿ ನಾಡು ಕಟ್ಟೋಣ ಭಾರತ ಕಟ್ಟೋಣ ಎಂದರು.
ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್, ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ, ಆನಂದ ಗುರುಸ್ವಾಮಿ, ಪ್ರದೀಪ ಪಕ್ಕಳ, ದಿನೇಶ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.