ಮಂಗಳೂರು: ಖ್ಯಾತ ಸಾಹಿತಿ, ಹೋರಾಟಗಾರ್ತಿ , ಕಾದಂಬರಿಗಾರ್ತಿ ಮತ್ತು ಮಹಿಳೆಯರ ಧ್ವನಿಯಾಗಿದ್ದ ನಾಡೋಜ ಸಾರಾ ಅಬೂಬಕರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತೂರಿನ ಭಾರತೀ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಎಸ್. ರೇವಣಕರ್ ಅವರು ಪುಷ್ಪ ನಮನ ಸಲ್ಲಿಸಿದರು.
ಸಾರಾ ಅಬೂಬಕರ್ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕ.ಸಾ,ಪ ಮಂಗಳೂರು ತಾಲೂಕಿನ ಗೌರವ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕ ಮಾತನಾಡಿ, ಸಾರಾ ಅಬೂಬಕರ್ ಅವರು ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಮಾನತೆಗಾಗಿ ಬಹಳಷ್ಟು ಕಾದಂಬರಿ ಮತ್ತು ಸಾಹಿತ್ಯ ರಚನೆ ಮಾಡಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಕನ್ನಡ ಸಾಹಿತ್ಯ ಲೋಕದ ಮಿನುಗುತಾರೆ.
ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಎಲ್ಲರೂ ಓದಲೇ ಬೇಕಾದ ಕೃತಿ ಎಂದು ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಕಸಾಪ ಮಂಗಳೂರು ಕೋಶಾಧಿಕಾರಿ ಸುಬ್ರಾಯ ಭಟ್, ಕಸಾಪ ಸದಸ್ಯರಾದ ಕೆ ಕ್ರಷ್ಣಪ್ಪ ನಾಯ್ಕ, ಗಿರೀಶ್ ತೋಟದ, ದಿವಾಕರ್ ಇದ್ದರು. ಮೌನ ಪ್ರಾರ್ಥನೆ ನಡೆಸಿ ನುಡಿ ನಮನ ಸಲ್ಲಿಸಲಾಯಿತು.