ದಕ್ಷಿಣ ಕನ್ನಡ (ಸುಳ್ಯ): ದಕ್ಷಿಣ ಕನ್ನಡ ಜಿಲ್ಲೆ ಸದಾ ಸುದ್ದಿಯಲ್ಲಿ ಇರುವ ಹಾಟ್ ಸಿಟಿ. ಒಂದಿಲ್ಲೊಂದು ಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿ ಇರುವ ಕರಾವಳಿ ಜಿಲ್ಲೆ ಈಗ ಕೋಮುಸೌಹಾರ್ದತೆಯ ಸೇತುವೆ ಆಗುವ ಮೂಲಕ ಸುದ್ದಿಯಲ್ಲಿದೆ. ಇಂತಹದೊಂದು ಪೋಟೊ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದೇ ಈ ಸುದ್ದಿಗೆ ಕಾರಣ ಎಂದು ಹೇಳಬಹುದು.
ಸುಳ್ಯದ ಕಲ್ಲುಗುಂಡಿಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿ ಪುಟಾಣಿ ಮಗುವನ್ನು ಮುಸ್ಲಿಂ ವೃದ್ಧರೊಬ್ಬರು ಕೈ ಹಿಡಿದುಕೊಂಡು ರಸ್ತೆ ದಾಟಿಸಿ ಹಣ್ಣು ತೆಗೆದುಕೊಟ್ಟು ಉಪಚರಿಸಿರುವ ಭಾವಚಿತ್ರವೂ ಎಲ್ಲರ ಗಮನ ಸೆಳೆಯುತ್ತಿದೆ.
ಇಬ್ರಾಹಿಂ ಮೈಲಿಕಲ್ಲು ಎಂಬುವವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅಯ್ಯಪ್ಪ ಮಾಲಾಧಾರಿ ಪುಟ್ಟ ಹುಡುಗ ರಸ್ತೆ ದಾಟುವುದಕ್ಕೆ ಪ್ರಯತ್ನಿಸುತ್ತಿದ್ದ, ವಾಹನಗಳ ಓಡಾಟದಿಂದ ಆತನಿಗೆ ರಸ್ತೆ ದಾಟುವುದಕ್ಕೆ ಸಮಸ್ಯೆ ಉಂಟಾಗಿತ್ತು, ಈ ವೇಳೆ ಇಬ್ರಾಹಿಂ ಅವರು ಇದನ್ನು ಗಮನಿಸಿ ಮಗುವಿನ ಕೈಹಿಡಿದು ರಸ್ತೆ ದಾಟಿಸಿದ್ದಾರೆ. ಅಲ್ಲದೆ ಆತನನ್ನು ಹಣ್ಣಿನಂಗಡಿಗೆ ಕರೆದೊಯ್ದು ಹಣ್ಣು ಕೊಡಿಸಿ ಕಳುಹಿಸಿದ್ದಾರೆ. ಇಬ್ರಾಹಿಂ ಅವರು ಪುಟ್ಟ ಹುಡುಗನ ಕೈಹಿಡಿದು ರಸ್ತೆ ದಾಟಿಸುತ್ತಿರುವ ಫೋಟೋವನ್ನು ಯಾರೋ ಕ್ಲಿಕ್ಕಿಸಿದ್ದು ಈ ಜಾಲತಾಣದಲ್ಲಿ ವೈರಲ್ಲ ಆಗಿದೆ.