ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳು ಸೋಮವಾರ ಕೆಲಸವನ್ನು ಸ್ಥಗಿತ ಮಾಡಿ ಮುಷ್ಕರ ನಡೆಸಿದ್ದು, ಕೂಳೂರು ಗೋಲ್ಡ್ ಪಿಂಚ್ ಮೈದಾನದ ಎದುರು ತ್ಯಾಜ್ಯ ಸಾಗಣೆಯ ವಾಹನಗಳನ್ನು ನಿಲ್ಲಿಸಿ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದರು.
ಸರಕಾರವು ನಿಗದಿಗೊಳಿಸಿದ ವೇತನವನ್ನು ಆ್ಯಂಟನಿ ವೇಸ್ಟ್ ಕಂಪನಿ ನೀಡದೆ ವಂಚಿಸುತ್ತಿದೆ. ಇದನ್ನು ಯಥಾವತ್ತಾಗಿ ನೀಡಬೇಕು. ಕಾರ್ಮಿಕರ ಗಳಿಕೆ ರಜೆ ಮತ್ತು ನಿಗದಿತ ರಜೆ, ಉಪಹಾರ ಬತ್ಯೆ ನೀಡಬೇಕು. ದುರಸ್ತಿ ಆಗದೇ ಇರುವ ವಾಹನಗಳನ್ನು ಬದಲಾಯಿಸಬೇಕು. ನಿಗದಿತ ಸಮಯಕ್ಕಿಂತ ಹೆಚ್ಚುವರಿ ದುಡಿಸಿಕೊಳ್ಳುವುದನ್ನು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂಬಿ ನಾಗಣ್ಣಗೌಡ, ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ಕೆ.ನಾರಾಯಣ ಶೆಟ್ಟಿ, ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಮುಖಂಡ ಎಂ.ಚಂದ್ರು, ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪಕೆರೆಕಾಡು ಅವರು ಮಾತನಾಡಿದರು.
ಮೇಯರ್ ಜಯಾನಂದ ಅಂಚನ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್, ಆರೋಗ್ಯ ಇಲಾಖೆಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಲಯ ಆಯುಕ್ತ ಶಬರಿನಾಥ ರೈ ಅವರು ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.
ಮಂಗಳವಾರ ಸಂಜೆ 5ಕ್ಕೆ ನಗರಪಾಲಿಕೆಯ ಅಧಿಕಾರಿಗಳು ಹಾಗೂ ಆ್ಯಂಟನಿ ವೇಸ್ಟ್ ಕಂಪನಿ ಮುಖ್ಯಸ್ಥರು ಮತ್ತು ಸಂಘಟನೆಯ ಪ್ರಮುಖರ ಜತೆಗೆ ವಿಶೇಷ ಸಭೆ ನಡೆಸಿ ಕಾರ್ಮಿಕರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಮಂಗಳೂರು ಸಪಾಯಿ ಕರ್ಮಚಾರಿಗಳ ಸಂಘದ ಮುಖಂಡ ಅಶೋಕ್ ಕೊಂಚಾಡಿ, ದಿನೇಶ್ ಕುಲಾಲ್, ಚೆನ್ನಕೇಶವ, ಸುಧೀರ್, ಸಿದ್ದರೂಡ, ಪೂವಪ್ಪ ಅವರು ಧರಣಿ ನೇತೃತ್ವ ವಹಿಸಿದ್ದರು.