ಮಂಗಳೂರು: ಕೋಟ್ಯಂತರ ಮೌಲ್ಯದ ತಿಮಿಂಗಿಲ ತ್ಯಾಜ್ಯ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.
ನಗರದ ಲಾಲ್ ಬಾಗ್ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಂತರ ಬೆಲೆ ಬಾಳುವ ಸಮುದ್ರ ಉತ್ಪನ್ನ ಅಂಬರ್ ಗ್ರೀಸ್ ಅನ್ನು ವಶದಲ್ಲಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಅವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧನ ಮಾಡಿದ್ದಾರೆ.
ಆರೋಪಿಗಳಿಂದ 3.2 ಕೆಜಿ ತೂಕದ ಅಂಬರ್ ಗ್ರೀಸ್ ಹಾಗೂ ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ 3.2 ಕೋಟಿ ರೂ. ಮೌಲ್ಯ ಎಂದು ಅಂದಾಜಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.