ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪಾಲಿಕೆ ಎರಡನೇ ದಿನ ಶನಿವಾರವೂ ಮುಂದುವರಿದಿದೆ.
ಶುಕ್ರವಾರ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ದಟ್ಟವಾದ ಬೆಂಕಿ ಕಾಣಿಸಿಕೊಂಡಿತ್ತು. ಗಾಳಿ ರಭಸ ಹೆಚ್ಚಾಗಿ ಇದ್ದ ಕಾರಣಕ್ಕೆ ಬೆಂಕಿ ಹತೋಟಿಗೆ ಬಂದಿರಲಿಲ್ಲ. ಅದರ ಭಾಗವಾಗಿ ಬೆಂಕಿ ನಿಯಂತ್ರಿಸುವ ಕಾರ್ಯವೂ ಮುಂದುವರೆದಿದೆ.
ಪಚ್ಚನಾಡಿಯಲ್ಲಿ ಹೊತ್ತಿಕೊಂಡಿರುವ ಬೆಂಕಿಯಿಂದಾಗಿ ಕಾವೂರು, ಬೊಂದೇಲ್, ವಾಮಂಜೂರು ಮತ್ತು ಇತರ ಪ್ರದೇಶಗಳು ಸೇರಿದಂತೆ ಅಕ್ಕಪಕ್ಕದ ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬೆಂಕಿ ನಂದಿಸುವ ಕಾರ್ಯಾಚರಣೆಯು ಮಧ್ಯರಾತ್ರಿ 2 ಗಂಟೆಯವರೆಗೆ ಮುಂದುವರೆದಿತ್ತು. ಶನಿವಾರ ಬೆಳಿಗ್ಗೆ 6.30 ಕ್ಕೆ ಮತ್ತೆ ಶುರು ಮಾಡಲಾಗಿತ್ತು. ಪಾಲಿಕೆ ಜತೆಗೆ , ರಾಜ್ಯ ಅಗ್ನಿಶಾಮಕ ಇಲಾಖೆ ಮತ್ತು ಎಂಎಸ್ ಇಜೆಡ್, ಕೆಐಒಸಿಎಲ್, ಎನ್ಎಂಪಿ, ಎಚ್ಪಿಸಿಎಲ್, ಎಂಸಿಎಫ್ ಸೇರಿದಂತೆ ಹಲವು ಸಂಸ್ಥೆಗಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
“ಒಂದೇ ದಿಕ್ಕಿನಿಂದ ಬೀಸುವ ಭಾರೀ ಗಾಳಿಯಿಂದಾಗಿ ಹೊಗೆಯ ಕಾರಣದಿಂದ ಶುಕ್ರವಾರ ಬೆಂಕಿ ನಂದಿಸುವ ಕಾರ್ಯಕ್ಕೆ ಹಿನ್ನಡೆ ಆಗಿದೆ. ಶನಿವಾರ ಬೆಂಕಿ ನಂದಿಸುವ ಕಾರ್ಯವೂ ಕೆಲ ಕಡೆಗೆ ಹತೋಟಿಗೆ ಬಂದಿದ್ದರು, ಗಾಳಿ ಇರುವ ಕಾರಣದಿಂದ ಬೆಂಕಿ ಹೊತ್ತಿಕೊಳ್ಳುತ್ತಲೇ ಇದೆ ಎಂದು ತಿಳಿಸಿದ್ದಾರೆ.
ಬೆಂಕಿ ಹರಡದಂತೆ ನೋಡಿಕೊಳ್ಳಲು ನೀರನ್ನು ಸಿಂಪಡಿಸಲಾಗುತ್ತದೆ. “ಕಸದ ರಾಶಿಯ ಅಡಿಯಲ್ಲಿ ಇನ್ನೂ ಬೆಂಕಿ ಇರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಕಸವನ್ನು ಉರುಳಿಸುವ ಕಾರ್ಯವೂ ಪ್ರಗತಿಯಲ್ಲಿ ಇದೆ. ಹೊಗೆಯನ್ನು ನಿಯಂತ್ರಣಕ್ಕೆ ತರಲು ಇನ್ನೂ ಒಂದು ದಿನ ಬೇಕಾಗಬಹುದು ಎಂದು ತಿಳಿಸಿದ್ದಾರೆ.