ಕಾಸರಗೋಡು: ಕೇರಳ ರಾಜ್ಯದಲ್ಲಿ ಕಲುಷಿತ ಆಹಾರ ಸೇವನೆಯಿಂದ ಇನ್ನೊಂದು ಸಾವು ಸಂಭವಿಸಿದೆ. ಕಾಸರಗೋಡಿನಲ್ಲಿ ಆನ್ ಲೈನ್ ಮೂಲಕ ಆರ್ಡರ್ ಮಾಡಿ ಬಿರಿಯಾನಿ ತರಿಸಿಸೊಂಡು ಸೇವಿಸಿದ್ದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ವರದಿ ಆಗಿದೆ.
ಕಾಸರಗೋಡು ಸಮೀಪದ ಪೆರುಂಬಳ ಎಂಬಲ್ಲಿನ ಅಂಜುಶ್ರೀ ಪಾರ್ವತಿ (20) ಮೃತಪಟ್ಟ ವಿದ್ಯಾರ್ಥಿನಿ. ಅಂಜುಶ್ರೀ ಪಾರ್ವತಿ ಕಾಸರಗೋಡು ಹೊಟೇಲ್ ವೊಂದರಿಂಧ ಡಿ.21ರಂದು ಆನ್ ಲೈನ್ ಮೂಲಕ ಬಿರಿಯಾನಿ ತರಿಸಿ ತಿಂದು ಅನಾರೋಗ್ಯಕ್ಕೆ ಇಡಾಗಿದ್ದರು.
ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಜುಶ್ರೀ ಪಾರ್ವತಿ ಬಿ.ಕಾಂ ವಿದ್ಯಾರ್ಥಿನಿ ಆಗಿದ್ದರು.
ವಿದ್ಯಾರ್ಥಿನಿ ಪೋಷಕರು ಈ ಕುರಿತು ದೂರು ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಕೇರಳ ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಆಹಾರ ಸುರಕ್ಷತಾ ಆಯುಕ್ತರಿಗೆ ಈ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಯುವತಿಗೆ ನೀಡಲಾದ ಚಿಕಿತ್ಸೆ ಕುರಿತು ಜಿಲ್ಲಾ ವೈದ್ಯಾಧಿಕಾರಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಲುಷಿತ ಆಹಾರ ಸರಬರಾಜು ಮಾಡುವ ಹೋಟೆಲ್ಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಪರೀಕ್ಷೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕೊಝಿಕ್ಕೋಡಿನ ರೆಸ್ಟಾರೆಂಟ್ನಿಂದ ಆಹಾರ ತರಿಸಿ ಸೇವಿಸಿದ್ದ ಕೋಟ್ಟಾಯಂ ವೈದ್ಯಕೀಯ ಕಾಲೇಜಿನ ನರ್ಸ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು.