ಉಡುಪಿ (ಗಂಗೊಳ್ಳಿ): ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಮಾಡುವುದಾಗಿ ಹೇಳಿದ್ದ ವಾಗ್ದಾನವೂ ಈಡೇರಿಲ್ಲ ಎಂದು ಸಾಂಪ್ರದಾಯಿಕ ಮೀನುಗಾರರು ಆಕ್ರೋಶ ಹೊರ ಹಾಕಿದ್ದು, 20 ದಿನಗಳೊಳಗೆ ಸೀಮೆಎಣ್ಣೆ ವಿತರಣೆ ಮಾಡದೇ ಇದ್ದಲ್ಲಿ ನೋಟಾ ಅಭಿಯಾನ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಗಂಗೊಳ್ಳಿ ವಲಯದ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಲ್ಲ ಸಚಿವರು, ಸಂಸದರು, ಶಾಸಕರಿಗೆ ನಮ್ಮ ಸಂಕಷ್ಟದ ಬಗ್ಗೆ ವಿವರಿಸಿದ್ದೇವೆ, ಜತೆಗೆ ಮನವಿ ಕೂಡ ಮಾಡಿಕೊಳ್ಳಲಾಗಿದೆ. ಆದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಲು ಮನವಿ ನೀಡಿದವರು ಯಾರೂ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
20 ದಿನದೊಳಗೆ 7000 ಕೆ.ಎಲ್ ಸೀಮೆಎಣ್ಣೆ ವಿತರಣೆ ಮಾಡದೇ ಇದ್ದಲ್ಲಿ ಗಂಗೊಳ್ಳಿ ಸಾಂಪ್ರದಾಯಿಕ ಮೀನುಗಾರರು ನೋಟಾ ಅಭಿಯಾನ ನಡೆಸಲು ತೀರ್ಮಾನಿಸಿದ್ದೆವೇ. ಅಭಿಯಾನ ನಡೆಸುವ ಮೊದಲು ಕರಾವಳಿ ಜಿಲ್ಲೆಗಳ ಎಲ್ಲ ಶಾಸಕರಿಗೆ ಪತ್ರ ರವಾನಿಸಿ ಅಭಿಯಾನವನ್ನು ನಡೆಸಲಾಗುತ್ತದೆ. ಕರಾವಳಿಯ ಉತ್ತರ ಕನ್ನಡ , ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.