ಮಂಗಳೂರು: ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಎರಡೂ ಕಿಡ್ನಿಗಳನ್ನು ಇಬ್ಬರು ರೋಗಿಗಳಿಗೆ ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಆಗಿ ಆಳವಡಿಸಲಾಗಿದೆ ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಬ್ಬರು ರೋಗಿಗಳಿಗೆ ಒಂದೇ ಆಸ್ಪತ್ರೆಯಲ್ಲಿ ಎರಡು ಕಿಡ್ನಿಗಳನ್ನು ಜೋಡಿಸುವ ಅವಕಾಶ ಸಿಗುವುದು ತುಂಬಾ ವಿರಳ. 7 ತಾಸುಗಳಲ್ಲಿ ಮೂತ್ರಪಿಂಡದ ಮರು ಜೋಡಣೆಯ ಕಾರ್ಯವನ್ನು ಎಜೆ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಿರುವುದು ಆಸ್ಪತ್ರೆಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡ ಎರಡೂ ರೋಗಿಗಳು 12 ದಿನಗಳೊಳಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕಳೆದ ವರ್ಷದ ಡಿ. 11ರಂದು ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡಲು ಅವರ ಕುಟುಂಬ ಮುಂದೆ ಬಂದಿತ್ತು. ಫಾದರ್ ಮುಲ್ಲ ರ್ ಆಸ್ಪತ್ರೆಯಲ್ಲಿ 12 ರಂದು ಶಸ್ತ್ರ ಚಿಕಿತ್ಸೆ ಮಾಡಿ ಅಂಗಾಂಗಗಳನ್ನು ಬೆಂಗಳೂರು, ಚೆನ್ನೈ, ಮಣಿಪಾಲ ಹಾಗೂ ಮೂತ್ರ ಪಿಂಡ (ಕಿಡ್ನಿ)ಗಳನ್ನು ಎ.ಜೆ.ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಅಂಗಾಂಗಗಳನ್ನು ನಿಗದಿತ ಸಮಯದಲ್ಲಿ ರೋಗಿಗಳಿಗೆ ಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಉ ಎಂದರು.
ಸಾಮಾನ್ಯವಾಗಿ ಎರಡು ಅಂಗಗಳು ಒಂದೇ ಆಸ್ಪತ್ರೆಗೆ ದೊರೆಯುವುದು ಬಹಳ ಅಪರೂಪ. ಎ.ಜೆ. ಆಸ್ಪತ್ರೆಯ ಡಾ. ಪ್ರೀತಮ್ ಶರ್ಮಾ, ಡಾ. ರೋಶನ್ ವಿ. ಶೆಟ್ಟಿ (ಕಸಿ ಶಸ್ತ್ರಚಿಕಿತ್ಸಕರು), ಡಾ. ರಾಘವೇಂದ್ರ ನಾಯಕ್ (ನೆಫ್ರಾಲಜಿಸ್ಟ್), ಡಾ.ಹರೀಶ್ ಕಾರಂತ್ (ಅರಿವಳಿಕೆ ತಜ್ಞ ) ಸೌಮ್ಯ (ಕಸಿ ಸಂಯೋಜಕಿ), ಲೀಲಾವತಿ ಹೆಗ್ಡೆ (ಡಯಾಲಿಸಿಸ್ ವಿಭಾಗ), ಸಿಬ್ಬಂದಿ ಸವಿನಾ ರೋಶ್ಮಿ, ಮಹಾಬಲ ಕಿಡ್ನಿಗಳ ಜೋಡೆಣೆಯ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮುಗಿಸಿದ್ದಾರೆ ಎಂದು ಡಾ. ಮಾರ್ಲ ತಿಳಿಸಿದರು.
ಅಂಗಾಂಗ ದಾನದ ಪ್ರಕ್ರಿಯೆಯನ್ನು 2015 ರಲ್ಲಿ ಎ.ಜೆ. ಆಸ್ಪತ್ರೆ ಕೈಗೊಂಡಿತ್ತು . ಈ ಪ್ರಕ್ರಿಯೆಗೆ ಅವಿಭಜಿತ ದಕ್ಷಿಣ ಕನ್ನಡದ ಪ್ರಪ್ರಥಮ ದಾನಿಗಳಾದ ಜೀವನ್ ಮತ್ತು ಲೀನಾ ಅವರ ಹೆಸರನ್ನು ಇಡಲಾಗಿದೆ. ಇದು ‘ಜೀವನ್ ವಿಲೀನ’ ಎಂಬ ಹೆಸರಲ್ಲಿ ಪ್ರಖ್ಯಾತವಾಗಿದೆ. ಅಂದಿನಿಂದ ಇಂದಿನವರೆಗೂ 41 ದಾನಿಗಳಿಂದ ಪಡೆದ ಅಂಗಾಂಗಗಳ ಜೋಡಣೆಯಿಂದ 150 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಡಾ. ಪ್ರಶಾಂತ್ ಮಾರ್ಲ ತಿಳಿಸಿದರು.
ಡಾ. ಪ್ರೀತಮ್ ಶರ್ಮಾ, ಡಾ. ರಾಘವೇಂದ್ರ ನಾಯಕ್ ಇದ್ದರು.