ಮಂಗಳೂರು: ಶಾಸಕ ಯು.ಟಿ ಖಾದರ್ಗೆ ಅವರಿಗೆ ಸಂಸದ ರಾಹುಲ್ ಗಾಂಧಿ ಆಪ್ತ ಸಹಾಯಕ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿರುವ ಬಗ್ಗೆ ಮಂಗಳೂರು ಸೈಬರ್ ಠಾಣೆಗೆ ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಶಾಸಕ ಯು.ಟಿ. ಖಾದರ್ ಅವರು ದೂರು ನೀಡಿದ್ದಾರೆ.
ಸೋಮವಾರ ಸುಮಾರು 1.30 ಕ್ಕೆ ಈ ಕರೆ ಬಂದಿದ್ದು, ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಶಾಸಕ ಖಾದರ್ ಅವರು ಕರೆ ಸ್ವೀಕರಿಸಲು ಆಗಿರಲಿಲ್ಲ. ಕರೆ ಸ್ವೀಕರಿಸಿದೆ ಇದ್ದಾಗ ನಾನು ಕಾನಿಷ್ಕ ಸಿಂಗ್, ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ಕರೆ ಮಾಡಿ ಎಂದು ಸಂದೇಶ ಕಳಿಸಿದ್ದಾರೆ. ನಂತರ ಟ್ರೂ ಕಾಲರ್ನಲ್ಲಿ ಪರಿಶೀಲನೆ ಮಾಡಿದಾಗ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೆಸರು ದಾಖಲಾಗಿದ್ದು ಗೊತ್ತಾಗಿದೆ.
ಅನುಮಾನದಿಂದ ಶಾಸಕ ಯು.ಟಿ ಖಾದರ್ ಅವರು ಸಂಬಂಧ ಪರಿಶೀಲನೆ ನಡೆಸಿದಾಗ ಇದೊಂದು ನಕಲಿ ಕಾಲ್ ಎಂಬುದು ಗೊತ್ತಾಗಿದೆ. ಕೂಡಲೇ ಈ ರೀತಿಯ ಕಿಡಿಗೇಡಿ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ಸೈಬರ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
ಸೈಬರ್ ಕ್ರೈಂ ಠಾಣೆ ಪೊಲೀಸರು ಈ ಸಂಬಂಧ ದೂರನ್ನು ಸ್ವೀಕರಿಸಿದ್ದು, ಕರೆ ಮಾಡಿದ ವ್ಯಕ್ತಿಯ ಪತ್ತೆ ಕಾರ್ಯ ನಡೆಸಿದ್ದಾರೆ.