ಕರಾವಳಿ ಡೈಲಿನ್ಯೂಸ್
ಮಂಗಳೂರು: ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಇದೇ 8 ರಂದು ” ಅಮೃತ ಆರೋಗ್ಯ ಮೇಳ “ಉಚಿತ ಆರೋಗ್ಯ ಸೇವಾ ಶಿಬಿರ ಜರುಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಆಯುಷ್ ಇಲಾಖೆ , ದೇರಳಕಟ್ಟೆಯ ಯೇನಪೋಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಹಾಗೂ ರೋಟರಿ ಕ್ಲಬ್ ಮಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಮೇಳದಲ್ಲಿ ವಿವಿಧ ತಜ್ಞ ವೈದ್ಯರುಗಳಿಂದ ಆರೋಗ್ಯ ತಪಾಸಣೆ, ಚಿಕಿತ್ಸಾ ಸಲಹೆ , ಕಣ್ಣಿನ ಚಿಕಿತ್ಸೆ, ಹಲ್ಲಿನ ಚಿಕಿತ್ಸೆ, ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ತಪಾಸಣೆ, ಅಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ತಪಾಸಣೆ, ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳು, ವಾತರೋಗ, ಶ್ವಾಸರೋಗ ಇತ್ಯಾದಿ ಪ್ರಮುಖ ಸಮಸ್ಯೆಗಳ ತಪಾಸಣೆ ನಡೆಸಿ ಚಿಕಿತ್ಸಾ ಸಲಹೆ ನೀಡಲಾಗುತ್ತದೆ ಎಂದು ತಿಳಿಸದ್ದಾರೆ.
ಆಯುಷ್ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿ ವಿಭಾಗಗಳ ತಜ್ಞರ ಸೇವೆ ಲಭ್ಯವಿದೆ. ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಹೊಂದಿರಬೇಕು. ಅದೇ ದಿನ ಪುಷ್ಯ ನಕ್ಷತ್ರದಂದು 16 ವರ್ಷಗಳ ವರೆಗಿನ ಮಕ್ಕಳಿಗೆ ನೀಡಲಾಗುವ “ಸುವರ್ಣ ಪ್ರಾಶನ” ಕೂಡ ಲಭ್ಯವಿದೆ, ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30 ರ ತನಕ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಆರೋಗ್ಯ ಶಿಬಿರದ ಪ್ರಯೋಜನ ಪಡೆಯಬೇಕಾಗಿ ಮಠದ ಪ್ರಕಟಣೆ ತಿಳಿಸಿದೆ