ಕರಾವಳಿ ಡೈಲಿನ್ಯೂಸ್
ಮಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ಬೇಡ ಎಂದು ನೀಡಿರುವ ಹೇಳಿಕೆ ಹಿಂದೆ ಯಾವದೋ ದೊಡ್ಡ ಲಾಭಿ ಇದೆ. ಸಚಿವರ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನ ಕಿಸಾನ್ ಸೆಲ್ ಮೂಲಕ ಶನಿವಾರದಿಂದ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಸಾಕಷ್ಟು ಮಂದಿ ಅಡಿಕೆ ಬೆಳೆಗಾರರು ಇದ್ದಾರೆ. ಅಡಿಕೆ ಬೆಳೆಯತ್ತ ರೈತರು ಮುಖ ಮಾಡಿದ್ದಾರೆ. ದೇಶದಲ್ಲಿ ಶೇ 50 ರಷ್ಟು ರೈತರು ಅಡಿಕೆ ಬೆಳೆಗಾರರು ಇದ್ದಾರೆ. ಕೋವಿಡ್ ಸಂದರ್ಭದಲ್ಲಿ ರೈತರನ್ನು ಕೈಹಿಡಿದಿದ್ದು ಅಡಿಕೆ ಬೆಳೆಯೇ ಎಂದು ಹೇಳಿದರು.
ಅಡಿಕೆ ದರ ಕುಸಿತ ಕಾಣುತ್ತಿದ್ದೆ. 50 ಸಾವಿರದಿಂದ 30 ಸಾವಿರಕ್ಕೆ ಕುಸಿದಿದೆ. ಚುಕ್ಕೆ ರೋಗದಿಂದ ಅಡಿಕೆ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಪರಿಹಾರ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಲು ಆಗುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಡಿಕೆ ಬೆಳೆಗೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಕ್ಯಾಪ್ಕೋಂ ದಿಂದ ಖರೀದಿ ಮಾಡುವಂತ ವ್ಯವಸ್ಥೆ ಮಾಡಲಾಗಿತ್ತು. ಅಡಿಕೆ ಕೃಷಿ ಮಾಡುವವರ ಬೆನ್ನೆಲಬು ಮುರಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಇದ್ದಾರೆ. ರೈತರ ಪರವಾಗಿ ಇಲ್ಲ. ರಾಹುಲ್ ಗಾಂಧಿ ಅವರು ಹೇಳಿದಂತೆ ಒಂದು ಶ್ರೀಮಂತರ ಭಾರತ ಹಾಗೂ ಬಡವರ ಭಾರತ ಇದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.
ಅಡಿಕೆ ದೀರ್ಘಕಾಲದ ಬೇಸಾಯ ಪದ್ದತಿ. ಸಾಲ ಮಾಡಿಕೊಂಡು ಅಡಿಕೆ ಬೆಳೆಯುವ ಬೆಳೆಗಾರರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ ಇದರಲ್ಲಿ ಇದೆ. ಸಚಿವರ ಹೇಳಿಕೆಯಿಂದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕರಾವಳಿ ಭಾಗದ ರೈತರಿಗೆ ಪೆಟ್ಟು ನೀಡುವ ಕೆಲಸವು ಸರ್ಕಾರಿಂದ ಆಗುತ್ತಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯೆ ಅಪ್ಪಿಲತಾ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷ ಉಮೇಶ್ ದಂಡಕೇರಿ, ಪಾಲಿಕೆ ವಿಪಕ್ಷ ನಾಯಕ ನವೀನ್ ಡಿಸೋಜ, ಮುಂಚೂಣಿ ಘಟಕಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಅಬ್ಬಾಸ್ ಅಲಿ, ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಡಿಸಿಸಿ ಪ್ರ.ಕಾರ್ಯದರ್ಶಿ ಶುಭೋದಯ ಆಳ್ವ, ಜಯಶೀಲಾ ಅಡ್ಯಾಂತಯ ಇದ್ದರು.