ಮಂಗಳೂರು: 64 ವರ್ಷದ ಹರಿಯಾಣದ ಸೈಕ್ಲಿಷ್ಟ್ ಕಮಲೇಶ್ ರಾಣಾ ಸೈಕಲ್ ಮೂಲಕವೇ ದೇಶ ಸಂಚಾರ ಹೊರಟ್ಟಿದ್ದಾರೆ. ಅವರು ಈಚೆಗೆ ಕರಾವಳಿ ಮಂಗಳೂರಿಗೆ ಬಂದಾಗ ಸಂಭವಿಸಿದ ಅಪಘಾತದಲ್ಲಿ ಕೈಗೆ ಪೆಟ್ಟಾಗಿದರೂ ತಮ್ಮ ಗುರಿಯಿಂದ ಮರಳಲಾರೆ ಎಂದು ಧೈರ್ಯದಿಂದ ಹೇಳಿದರು.
ಮಂಗಳೂರಿನ ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಮಾಸ್ಟರ್ಸ್ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಹಲವಾರು ಪದಕ ಗಳಿಸಿದ್ದೇನೆ. ಶ್ರೀನಗರದಿಂದ ಕನ್ಯಾಕುಮಾರಿಗೆ ಸೈಕಲ್ ಜಾಥಾ ಹೊರಟಿದ್ದೆ. ಡಿ. 22 ರಂದು ಮಂಗಳೂರಿಗೆ ಬಂದು ತಲುಪಿದ ಸಂದರ್ಭದಲ್ಲಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕೈ ಮುರಿಯಿತು. ಕೈಗೆ ಬಲವಾದ ಏಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಪತ್ರಕರ್ತ ನಂದಗೋಪಾಲ್ ಮತ್ತು ಸುಚಿತಾ ದಂಪತಿ ಪರಿಚಯವಾಗಿ ಅವರ ಆತಿಥ್ಯ ದೊಂದಿಗೆ ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ಕೈಗೆ ಪೆಟ್ಟಾಗಿದ್ದರೂ ಪ್ರಯಾಣ ಮುಂದುವರಿಸುವ ಉತ್ಸುಕತೆ ಇದೆ ಎಂದು ಹೇಳಿದರು.
ಸೈಕಲ್ ಬಳಕೆ, ನಿರಂತರ ವ್ಯಾಯಾಮ, ಯೋಗ ಮಾಡುವುದರಿಂದ ಮಧುಮೇಹದಿಂದ ದೂರ ಇರಬಹುದು. ನನ್ನ ಅನುಭವದ ಮಾತು. ಇದನ್ನೂ ದೇಶದ ಜನತೆಯೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಸೈಕಲ್ ಜಾಥಾ ಶುರು ಮಾಡಿದ್ದೇನೆ. ಮಧುಮೇಹದಿಂದ ಬಳಲುತ್ತಿದ್ದ ನಾನು ಸೈಕಲ್ ತುಳಿಯುವುದಕ್ಕೆ ಆರಂಭಿಸಿದ ನಂತರ ಮಧುಮೇಹದಿಂದ ಮುಕ್ತಳಾದೇ ಎಂದು ತಿಳಿಸಿದರು.