ಸುಬ್ರಹ್ಮಣ್ಯ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.
ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಸಚಿವೆ ಸಂಕಲ್ಪ ನೆರವೇರಿಸಿದರು. ಬಳಿಕ ದೇವರ ದರುಶನ ಪಡೆದು ಪಂಚಾಮೃತ ಮಹಾಭಿಷೇಕ ಸೇವೆ ಸಮರ್ಪಿಸಿದರು. ಮಧ್ಹಾಹ್ನ ದೇವರ ಮಹಾಪೂಜೆ ವೀಕ್ಷಿಸಿ ಮಹಾಪೂಜಾ ಸೇವೆ ನೆರವೇರಿಸಿದರು.
ಬಳಿಕ ಪ್ರಾರ್ಥನೆ ಸೇವೆ ನಡೆಸಿ ತನ್ನ ಅಭೀಷ್ಠೆಗಳನ್ನು ದೇವರಲ್ಲಿ ನಿವೇದಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯ ಅವರು ಸಚಿವರಿಗೆ ಶಾಲು ಮತ್ತು ದೇವರ ಮಹಾಪ್ರಸಾದ ನೀಡಿ ಹರಸಿದರು.
ಗೌರವಾರ್ಪಣೆ: ನಂತರ ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ನಂತರ ದೇವಳದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದರು. ತದನಂತರ ಆಡಳಿತ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ದೇವರ ಮಹಾಪ್ರಸಾದ ನೀಡಿ ಗೌರವಿಸಿದರು. ಬ್ರಹ್ಮರಥ ಎಳೆದ ಪವಿತ್ರ ಬೆತ್ತವನ್ನು ಸಚಿವರಿಗೆ ನೀಡಿದರು. ಬಳಿಕ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ಸಚಿವರು ದರುಶನ ಪಡೆದು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.
ಕೇವಲ ಕುಕ್ಕೆ ಕ್ಷೇತ್ರದಲ್ಲಿ ಸೇವೆ ನೆರವೇರಿಸಲು ಸಲುವಾಗಿಯೇ ದೆಹಲಿಯಿಂದ ಆಗಮಿಸಿದ ಸಚಿವರು ಬೆಳಗ್ಗೆ 9 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ಸಂಕಲ್ಪ ವಿದಿ ವಿಧಾನ ನೆರವೇರಿಸಿ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. 1 ಗಂಟೆಗೂ ಅಧಿಕ ಕಾಲ ದೇವರ ಪಂಚಾಮೃತ ಮಹಾಭಿಷೇಕ ವೀಕ್ಷಿಸಿದರು.
ಬಳಿಕ ಸಂವಾದದಲ್ಲಿ ಭಾಗವಹಿಸಿ ಮತ್ತೆ ದೇವಳಕ್ಕೆ ಬಂದು ಮಹಾಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು.
ಸಚಿವೆ ಜತೆಗೆ ಅವರ ಪತಿ ಜುಬಿನ್ ಇರಾನಿ ಮತ್ತು ಮಗಳು ಜೋಯಿಸ್, ಆಂಧ್ರ ಪ್ರದೇಶದ ಬಿಜೆಪಿ ವಕ್ತಾರ ತಿರುಪತಿ ಭಾನುಪ್ರಸಾದ್ ಆಗಮಿಸಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ.ವಿ.ಭಟ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್, ಮಾಸ್ಟರ್ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಶಿಷ್ಠಾಚಾರ ವಿಭಾಗದ ಕೆ.ಎಂ.ಗೋಪಿನಾಥ್ ನಂಬೀಶನ್, ಪ್ರಮೋದ್ ಕುಮಾರ್ ಎಸ್, ನವೀನ್ ಇದ್ದರು.