ಕರಾವಳಿ ಡೈಲಿನ್ಯೂಸ್ ಡೆಸ್ಕ್
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾಗಿ, ಮನೋಜ್ಞ ನಟನೆ ಮೂಲಕ ವೀಕ್ಷಕರ ಮನ ಸೆಳೆದ ಕಲಾವಿದರು ಮುಖ ಮಾಡುವುದು ಹಿರಿತೆರೆಯತ್ತ. ಇದೀಗ ಕಿರುತೆರೆ ನಟ ರಾಜೇಶ್ ಧ್ರುವ ಅವರ ಸರದಿ! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕ ಸಿದ್ಧಾರ್ಥ ತಮ್ಮ ಅಖಿಲ್ ಆಗಿ ನಟಿಸಿದ್ದ ರಾಜೇಶ್ ಧ್ರುವ ಅಭಿನಯದ ಮೂಲಕ ಮನ ಸೆಳೆದ ಹ್ಯಾಂಡ್ ಸಮ್ ಹುಡುಗ.
ಏಳು ವರ್ಷಗಳ ಕಾಲ ಒಂದೇ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದ ರಾಜೇಶ್ ಧ್ರುವ ಇದೀಗ ಹಿರಿತೆರೆಯಲ್ಲು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಂದ ಹಾಗೇ ರಾಜೇಶ್ ಧ್ರುವ ಅವರು ಕೇವಲ ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಹಿರಿತೆರೆಗೆ ಕಾಲಿಟ್ಟಿದ್ದು ಅವರನ್ನು ಹಿರಿತೆರೆಯಲ್ಲಿ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಜನವರಿ 6 ರಂದು ಬಿಡುಗಡೆಯಾಗಲಿರುವ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾದಲ್ಲಿ ನಾಯಕ ಫೋಟೋಗ್ರಾಫರ್ ಪುಟ್ಟು ಆಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ರಾಜೇಶ್ ಮೋಡಿ ಮಾಡಲಿದ್ದಾರೆ. ಜೊತೆಗೆ ಈ ಸಿನಿಮಾದ ನಿರ್ದೇಶನವನ್ನು ಕೂಡಾ ಸ್ವತಃ ಅವರೇ ಮಾಡಲಿದ್ದಾರೆ.
ಅಂದ ಹಾಗೇ ರಾಜೇಶ್ ಧ್ರುವ ಅವರಿಗೆ ನಿರ್ದೇಶನದ ಕ್ಷೇತ್ರ ಹೊಸದೇನಲ್ಲ. ಈಗಾಗಲೇ ಅನಿರೀಕ್ಷಿತ, ಆಮಂತ್ರಣ, ರೌದ್ರಂ, ತದ ನಂತರ ಎನ್ನುವ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಇರುವ ರಾಜೇಶ್ ಎಲ್ಲಾ ವಿಚಾರಗಳನ್ನು ಹಂತಹಂತವಾಗಿ ಕಲಿತುಕೊಂಡಿದ್ದರು. ಇದೀಗ ಚೊಚ್ಚಲ ಸಿನಿಮಾವನ್ನು ನಿರ್ದೇಶಿಸಿದ್ದು ಕಾತರದಿಂದ ಕಾಯುತ್ತಿದ್ದಾರೆ.
ಬದುಕು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಜೇಶ್ ಧ್ರುವ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಬದುಕು ಧಾರಾವಾಹಿಯ ನಂತರ ಆಕಾಶದೀಪ ,ಮಿಲನ , ಒಂದೇ ಗೂಡಿನ ಹಕ್ಕಿಗಳು ,ಪ್ರೀತಿ ಎಂದರೇನು, ಸರಯೂ, ನಂದಿನಿ, ಅಗ್ನಿಸಾಕ್ಷಿ, ಅಣ್ಣ ತಂಗಿ ಧಾರಾವಾಹಿಗಳಲ್ಲಿ ನಟಿಸಿರುವ ರಾಜೇಶ್.
ಒಂದೇ ಗೂಡಿನ ಹಕ್ಕಿಗಳು ಧಾರಾವಾಹಿಯಲ್ಲಿ ಖಳನಾಯಕರಾಗಿಯೂ ಅಬ್ಬರಿಸಿದ್ದಾರೆ. ಇದರ ಜೊತೆಗೆ ಅರಮನೆ ಗಿಳಿ ಹಾಗೂ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕವೂ ಮನ ಸೆಳೆದಿದ್ದಾರೆ. ಈಗ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ರಾಜೇಶ್ ಧ್ರುವ ಅವರಿಗೆ ಕರಾವಳಿ ಡೈಲಿ ನ್ಯೂಸ್ ಕಡೆಯಿಂದ ಆಲ್ ದಿ ಬೆಸ್ಟ್.