ಕರಾವಳಿ ಡೈಲಿನ್ಯೂಸ್
ಹೊನ್ನಾವರ: ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಮಂಕಿ ಈಶ್ವರ ನಾಯ್ಕ್ ಖಾಜಿಮನೆ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು ಇದ್ದಾರೆ. ಹಿರಿಯ ಪುತ್ರ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಪುತ್ರ ರೈಲ್ವೆ ಪೊಲೀಸ್ ಆಗಿ ಸಾಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಕಿ ಈಶ್ವರ ನಾಯ್ಕ್ ಖಾಜಿಮನೆ ಅವರು ನಾಲ್ಕು ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಂಕಿ ವಿಎಸ್ ಎಸ್ ಬ್ಯಾಂಕ್ ಹಾಲಿ ನಿರ್ದೇಶಕರಾಗಿದ್ದರು. ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. 35 ವರ್ಷ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮಂಕಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, ಸಮಾಜದ ವೆಂಕಟರಮಣ ದೇವಸ್ಥಾನದ ಉಪಾಧ್ಯಕ್ಷರಾಗಿದ್ದರು.
ತಾಲೂಕಿನಲ್ಲಿ ಎಲ್ಲಾ ಸಮಾಜದವರ ಜತೆಗೆ ಉತ್ತಮ ಒಡನಾಟ ಸಂಬಂಧ ಇಟ್ಟುಕೊಂಡಿದ್ದರು. ಜನರು ಇವರನ್ನು ಪ್ರೀತಿಯಿಂದ ಈಶ್ವರಣ್ಣ ಎಂದೇ ಕರೆಯುತ್ತಿದ್ದರು. ಮಾಜಿ ಶಾಸಕ ಮಂಕಾಳ ವೈದ್ಯ ಅವರ ಒಡನಾಡಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ನಡೆಯುತ್ತಿರುವ ಸಭೆಯಲ್ಲಿ ಸಕ್ರಿಯವಾಗಿದ್ದರು. ಈಚೆಗೆ ಅನಂತವಾಡಿ ಪಂಚಾಯಿತಿ ಕಾಂಗ್ರೆಸ್ ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ಮಂಕಾಳ್ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಜೆ. ಗೌಡ, ವನಿತಾ ನಾಯ್ಕ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ನಾಯ್ಕ ಮಂಕಿ, ಮಾಜಿ ಸೈನಿಕ ವಾಮನ ನಾಯ್ಕ ಮಂಕಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಅಣ್ಣಪ್ಪ ನಾಯ್ಕ, , ಅಣ್ಣಯ್ಯ ನಾಯ್ಕ, ಗೋವಿಂದ ನಾಯ್ಕ, ಗಜು ನಾಯ್ಕ, ಗಿರೀಶ್ ನಾಯ್ಕ, ಮಂಕಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಷಾ ನಾಯ್ಕ ಮಂಕಿ, ಲೋಕೇಶ್ ಸೇರುಗಾರ ಸೇರಿದಂತೆ ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.