ಮಂಗಳೂರು: ‘ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಸುರತ್ಕಲ್ ಮಾರುಕಟ್ಟೆ ಬಗ್ಗೆ ಚುಕ್ಕೆ ಗುರುತಿನ ಪ್ರಶ್ನೆಯ ವೇಳೆಯಲ್ಲಿ ಶಾಸಕ ಭರತ್ ಶೆಟ್ಟಿ ಅವರು ಪ್ರಸ್ತಾಪಿಸಿದ್ದು, ಇದಕ್ಕೆ ಸಚಿವ ಭೈರತಿ ಬಸವರಾಜ್ ಅವರು ನೀಡಿರುವ ಉತ್ತರ ಎಲ್ಲವೂ ಸ್ಕ್ರೀಪ್ಟ್ ಮಾದರಿಯದ್ದು, ಕಲಾಪ ನಡೆಯುವ ಪವಿತ್ರ ಮನೆಯಲ್ಲಿ ಶುದ್ದ ಸುಳ್ಳು ಹೇಳುವ ಮೂಲಕ ಮತದಾರರಿಗೆ ಮೋಸ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮಾಜಿ ಶಾಸಕ ಮೊಯಿದ್ದೀನ ಬಾವಾ ಆರೋಪಿಸಿದರು.
ಶಾಸಕರು ಕೇಳಬೇಕಾಗಿದ್ದ ಪ್ರಶ್ನೆಯನ್ನೇ ಸಚಿವರು ಉತ್ತರ ರೂಪದಲ್ಲಿ ನೀಡಿದ್ದಾರೆ. ಸಚಿವರು ಉತ್ತರ ನೀಡಿದಂತೆ ಸುರತ್ಕಲ್ ಮಾರುಕಟ್ಟೆ ನಿರ್ಮಾಣಕ್ಕೆ ಯಾವುದೇ ಅಡೆತಡೆಗಳು ಇಲ್ಲ. 2017 ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಅವರು ವಿಶೇಷ 162 ಕೋಟಿ ಮಂಜೂರಿ ಮಾಡಿದ್ದರು. ಎಲ್ಲವೂ ಸರಿಯಾಗಿ ಇದ್ದದ್ದರಿಂದಲೇ 14 ಕೋಟಿ ಮೊತ್ತದ ಕಾಮಗಾರಿ ಮಾಡಲಾಗಿದೆ ಎಂದರು.
ಬಿಜೆಪಿ ಸರ್ಕಾರದ ಶಾಸಕರು ಹಾಗೂ ಸಚಿವರು ಸುಳ್ಳನ್ನು ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ 61 ಕೋಟಿ ರೂಪಾಯಿ ಬಿಡುಗಡೆ ಆಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭರತ್ ಶೆಟ್ಟಿ ಅವರು ಕಮಿಷನ್ ಕೊಟ್ಟರೆ ಮಾತ್ರ ಕಾಮಗಾರಿ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದರಿಂದಲೇ ಗುತ್ತಿಗೆದಾರ ಕಾಮಗಾರಿ ಮಾಡದೇ ವಾಪಸ್ ಹೋದರು. ಈ ಕಾಮಗಾರಿ ನಿಲ್ಲುವುದಕ್ಕೆ ಶಾಸಕ ಭರತ್ ಶೆಟ್ಟಿ ಅವರೇ ಕಾರಣ ಎಂದು ಆರೋಪಿಸಿದರು.
ಇನ್ನೇನೂ ಮುರ್ನಾಲ್ಕು ತಿಂಗಳಲ್ಲಿ ಅವರ ಶಾಸಕ ಅವಧಿ ಮುಗಿದು ಮನೆಗೆ ಹೋಗುವ ಸಮಯ ಬಂದಿದೆ. ಈ ಸಮಯದಲ್ಲಿ ಅವರಿಗೆ ಸುರತ್ಕಲ್ ಅಭಿವೃದ್ಧಿ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಭರತ್ ಶೆಟ್ಟಿ ಅವರೇ ಮಾರುಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗ 80 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿರುವ ಸಚಿವರ ಹೇಳಿಕೆ ಹಾಸ್ಯಾಸ್ಪದ. ಕಮಿಷನ್ ಧಂದೆಯಲ್ಲಿ ಬಿಜೆಪಿ ಸರ್ಕಾರ ಹಾಗೂ ಶಾಸಕರು ತೊಡಗಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬರುವ ದಿನಗಳಲ್ಲಿ ಅವರ ಎಲ್ಲ ಭ್ರಷ್ಟಾಚಾರಗಳನ್ನು ಜನರ ಮುಂದೇ ಇಡುವವನಿದ್ದೇನೆ. ಶಾಸಕ ಭರತ್ ಶೆಟ್ಟಿ ಅವರು ನಮ್ಮ ಶಾಸಕತ್ವದ ಅವಧಿಯಲ್ಲಿ ಮಂಜೂರಿ ಮಾಡಿಸಿದ ಯೋಜನೆಗಳನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಿ ಉಳಿದ ಕಾಮಗಾರಿಗಳನ್ನು ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ಅವರು ಎಷ್ಟು ಕೋಟಿ ಅನುದಾನ ತಂದಿದ್ದಾರೆ ಎಂದು ಬಹಿರಂಗ ಚರ್ಚೆಗೆ ಬರಲಿ. ಶಾಸಕರು ಗುತ್ತಿಗೆದಾರರನ್ನು ಲೂಟಿ ಮಾಡುತ್ತಿದ್ದಾರೆ. ಕುಮ್ಕಿ ಜಾಗದಲ್ಲಿ ಜನರ ಮೇಲೆ ಒತ್ತಡ ಹಾಕಿ ಜಮೀನು ಕಬಳಿಸುವ ಕೃತ್ಯ ನಡೆಯುತ್ತಿದೆ. ಇದೇ 31 ರಂದು ಅವರ ವಿರುದ್ಧ ಪಾದಯಾತ್ರೆ ಮಾಡಲಾಗುತ್ತದೆ. ಸೋಲುವ ಭೀತಿ ಅವರಲ್ಲಿ ಕಾಡುತ್ತಿದೆ ಎಂದು ಮೊಯಿದ್ದೀನ ಬಾವಾ ಆರೋಪಿಸಿದರು,
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಗಣೇಶ್ ಪೂಜಾರಿ, ಎಸ್ಸಿ,ಎಸ್ಟಿ ಸುರತ್ಕಲ್ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ, ಯುತ್ ಕಾಂಗ್ರೆಸ್ ಪದಾಧಿಕಾರಿ ಫಯಾಜ್, ಡಿಸಿಸಿ ಕಾರ್ಯದರ್ಶಿ ನಜೀರ್ ಬಜಾಲ್, ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ ಇದ್ದರು.